ತಾಳಿಕೋಟಿ: ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಸಮೀಪಿಸುತ್ತಿವೆ ವಿದ್ಯಾರ್ಥಿಗಳು ವಿಚಲಿತರಾಗದೇ ಆತ್ಮವಿಶ್ವಾಸ ಬೆಳಸಿಕೊಂಡು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶನಿವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಳಿಕೋಟಿ ತಾಲೂಕ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸ, ರಸಪ್ರಶ್ನೆ ಹಾಗೂ ವಯೋನಿವೃತ್ತಿ ಹೊಂದಿದ ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಹಸಿಲ್ದಾರ್ ಡಾ. ವಿನಯಾ ಹೂಗಾರ ಅವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಗಳು ಸಮೀಪಿ ಸುತ್ತಿರುವುರಿಂದ ಹೆಚ್ಚು ಓದದೇ ಇಲ್ಲಿಯವರೆಗೆ ಓದಿದ್ದನ್ನು ಪುನರಾವರ್ತಿಸಬೇಕು. ರಾತ್ರಿಯಲ್ಲಿ ಹೆಚ್ಚು ಓದುವುದನ್ನು ಕಡಿಮೆ ಮಾಡಿ ಬೇಗ ಮಲಗಿ ಬೇಗ ಎದ್ದು ಓದುವ ಹವ್ಯಾಸ ಬೆಳೆಸಿಕೊಳ್ಳಿ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ಶಿಕ್ಷಕರ ಪರಿಶ್ರಮದ ಜೊತೆ ನಿಮ್ಮ ಪ್ರಯತ್ನದಿಂದ ಫಲಿತಾಂಶ ಬರುತ್ತದೆ. ಈ ಬಾರಿ ತಾಲೂಕಿಗೆ ಒಳ್ಳೆಯ ಫಲಿತಾಂಶ ತರಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು. ಬಿಇಓ ಬಿ.ಎಸ್.ಸಾವಳಗಿ ಅವರು ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ತೃಪ್ತಿಕರವಾಗಿಲ್ಲ ಈ ಬಾರಿ ಎರಡೂ ತಾಲೂಕಿನಲ್ಲಿ ಉತ್ತಮ ಫಲಿತಾಂಶ ತರಲು ಎಲ್ಲರೂ ಕೂಡಿ ಪ್ರಯತ್ನಿಸೋಣ, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ ಖಂಡಿತ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದರು. ವಿಜಯಪುರ ಡೈಟ್ ಉಪನ್ಯಾಸಕ ಮುಜಾವರ, ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಜ ಬಿರಾದಾರ ಹಾಗೂ ಸಂಘದ ತಾಲೂಕ ಅಧ್ಯಕ್ಷ ವೈ ಬಿ ಬಡಿಗೇರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಯೋನಿವೃತ್ತ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಸ್ಎಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಬಿ.ಐ.ಹಿರೆಹೋಳಿ,ಡಾ.ಇರಾಜ, ಸುವರ್ಣಾ ಗದುಗಿನಮಠ ಹಾಗೂ ಅಪ್ಪಾಸಾಹೇಬಗೌಡ ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು. ಎಂಡಿಎಂ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ಲ, ಇಸಿಓ ಆರ್.ಬಿ.ದಮ್ಮೂರಮಠ, ಉದ್ಯಮಿ ಪರಶುರಾಮ ಹಂಚಾಟೆ, ಎನ್.ಬಿ. ಪಿಂಜಾರ,ಕ.ರಾ.ಸ.ನೌ.ಸಂ. ತಾಲೂಕಾಧ್ಯಕ್ಷ ಎಸ್.ಬಿ.ಚೌದ್ರಿ,ನೋಡಲ್ ಅಧಿಕಾರಿ ಎಂ.ಕೆ.ಬಾಗವಾನ, ಶಿಕ್ಷಕಿ ಆರ್.ಜಿ. ದೇಸಾಯಿ, ಒಡೆಯರ್, ಅರ್ಜುನ ಮಲ್ಲೇ ವಾಡಿ, ಸಂತೋಷ ಕದಂ,ಸಚೀನ ಹಂಚಾಟೆ, ಬಾಪುಗೌಡ ಪಾಟೀಲ, ಸಿಆರ್ಸಿ ರಾಜು ವಿಜಾಪುರ, ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಪದಾಧಿಕಾರಿ,ನಾಮ ನಿರ್ದೇಶಿತ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

