ತಾಳಿಕೋಟಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ವೃತ್ತ,ನೂತನ ಸಭಾಭವನ ಉದ್ಘಾಟನೆ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅನುಭವ ಮಂಟಪದ ಶಂಕುಸ್ಥಾಪನೆ ಇಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮುಂಜಾನೆ 7:30 ಘಂಟೆಗೆ ಪಟ್ಟಣದ ಭೀಮನ ಭಾವಿಯಿಂದ ಸುಮಂಗಲೆಯರಿಂದ ಕುಂಭ ಕಳಸದೊಂದಿಗೆ ಗಂಗಸ್ಥಳಕ್ಕೆ ಪೂಜೆ ಸಲ್ಲಿಸಿ ನಂತರ ಜಗದ್ಗುರು ಪೂಜ್ಯಶ್ರೀ ಚೌಡಯ್ಯ ಮಹಾಸ್ವಾಮಿಗಳನ್ನು ಬೆಳ್ಳಿರಥದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ವೃತ್ತದ ವರೆಗೆ ಸಕಲ ವಾದ್ಯ ಮೇಳಗಳೊಂದಿಗೆ ನಡೆಯುವುದು. ಬೆಳಿಗ್ಗೆ 11 ಗಂಟೆಗೆ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಅವರ ಪ್ರತಿಮೆಯ ವೃತ್ತದ ಅನಾವರಣ ಮಾಡಲಾಗುವುದು. ಮಧ್ಯಾಹ್ನ 12:00 ಘಂಟೆಗೆ ಪಟ್ಟಣದ ವಿದ್ಯಾ ಭಾರತಿ ಪ್ರೌಢಶಾಲೆ ಆವರಣದಲ್ಲಿ ಧರ್ಮಸಭೆ ನಡೆಯುವುದು. ಇದರ ದಿವ್ಯ ಸಾನಿಧ್ಯವನ್ನು ಜಗದ್ಗುರು ಪೂಜ್ಯಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ವಹಿಸುವರು. ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಸಮಾರಂಭ ಉದ್ಘಾಟಿಸುವರು. ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ್ ತಂಗಡಗಿ ಅಧ್ಯಕ್ಷತೆ ವಹಿಸುವರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಚೌಡಯ್ಯನವರ ಭಾವಚಿತ್ರಕ್ಕೆ ಹಾಗೂ ಜಗನ್ಮಾತೆ ಗಂಗಾಪರಮೇಶ್ವರಿ ಭಾವಚಿತ್ರಕ್ಕೆ ಶ್ರೀಮತಿ ಮಾಲಾ ಜಿ. ನಾರಾಯಣರಾವ್ ಪುಷ್ಪಾರ್ಚನೆ ಮಾಡುವರು. ಮಾಜಿ ಸಚಿವ ಪ್ರಮೋದ ಮಧ್ವರಾಜ್ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಚೌಡಯ್ಯನವರ ಪ್ರತಿಮೆ ವೃತ್ತ ಅನಾವರಣಗೊಳಿಸುವರು. ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಅನುಭವ ಮಂಟಪದ ಶಂಕುಸ್ಥಾಪನೆ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಿ.ಪಂ.ಮಾಜಿ ಸದಸ್ಯ ಮಹಾಂತಗೌಡ ಪಾಟೀಲ ಸಮುದಾಯ ಭವನ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಬಸವರಾಜ್ ಸಪ್ಪನಗೋಳ, ಬಿ.ಕೆ.ಮೋಹನ ಕುಮಾರ, ಶಿವಕುಮಾರ ನಾಟೀಕಾರ,ಜೆ.ಟಿ.ವೆಂಕಟೇಶ, ಡಾ.ಎಸ್.ಕೆ.ಮೇಲಕಾರ, ಎಲ್ ಸಿ ಕೋಲ್ಕಾರ, ಶಿವಾಜಿ ಮೆಟಗಾರ ಅಮರೇಶಣ್ಣ ಕಾಮನಕೇರಿ ಆಗಮಿಸುವರು. ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ತಾಲೂಕಿನಿಂದ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸಲಿದ್ದು ಸರ್ವ ಸಮಾಜದ ಗಣ್ಯರು ಹಿರಿಯರನ್ನು ಆಮಂತ್ರಿಸಲಾಗುತ್ತಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ತಂಗಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

