ಮರಗಳು ಜೀವನದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಮಕ್ಕಳು ಕಲಾಕೃತಿಗಳ ಮೂಲಕ ಸಾರಿದರು. ಮರಗಳಿಂದಲೇ ಜೀವನ ಎಂಬುದನ್ನು ಸಾಂಕೇತಿಕರಿಸುವ ವಿಶಿಷ್ಟಪೂರ್ಣವಾದ ಚಿತ್ರಕಲಾ ಶಿಬಿರವನ್ನು ಇಂಟ್ಯಾಚ್ ವಿಜಯಪುರ ಘಟಕದ ನೇತೃತ್ವದಲ್ಲಿ ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.ವಿವಿಧ ಭಾಗಗಳಿಂದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಗಳನ್ನು ರಚಿಸಿದರು.ಪ್ರೊ.ವಿಠ್ಠಲ ಟಂಕಸಾಲಿ ಮಾತನಾಡಿ, ಗಿಡಗಳು ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಅವು ಆಮ್ಲಜನಕ ನೀಡುವದರಿಂದ ನಮ್ಮ ಬದುಕು ಸ್ವಾಸ್ಥ್ಯವಾಗುವುದು. ನೀವು ಇಂದಿನ, ಮುಂದಿನ ಜನಾಂಗಕ್ಕೆ ಕೋಟಿವೃಕ್ಷ ಅಭಿಯಾನದಂತೆ ನೀವು ಅಭಿಯಾನ ನಡೆಸಿ ಅವುಗಳನ್ನು ಬೆಳೆಸಿ ನಾಡು ಹಸಿರನ್ನಾಗಿ ಮಾಡುವುದು ಅವಶ್ಯ ಎಂದರು.ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎಸ್.ಮದಭಾವಿ ಮಾತನಾಡಿ, ಪರಿಸರವನ್ನು ನಾವು ಕಾಪಾಡಿಕೊಳ್ಳುವದು ಮುಖ್ಯ. ಅಂದಾಗ ಅದು ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.ನೀವು ಗಿಡಗಳನ್ನು ಹಚ್ಚಿ, ಅವುಗಳ ಸಂರಕ್ಷಣೆ ಮತ್ತು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರಿಂದ ನಮ್ಮ ಸಾಂಸ್ಕೃತಿಕ ಪರಿಸರವನ್ನು ಉತ್ತಮವಾಗಿ ಕಾಯ್ದುಕೊಳ್ಳಲು ಸಾಧ್ಯ ಎಂದರು.ಇಂಟ್ಯಾಚ್ ಸಂಚಾಲಕ ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ಪರಿಸರ ಪ್ರಜ್ಞೆ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಬೆಲೆ ಕಟ್ಟಲಾಗದ ಅಮೂಲ್ಯ ಆಮ್ಲಜನಕ, ಫಲ-ಪುಷ್ಪಗಳನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ನೀಡುವ ಗಿಡಮರಗಳನ್ನು ನಾವು ಕಡೆಯುತ್ತೇವೆ, ಆದರೆ ಗಿಡಗಳನ್ನು ನಾವು ಬೆಳೆಸುವ ಕಾರ್ಯ ಮಾಡಬೇಕು ಎಂದರು.ಬಿ.ಎಂ.ಪಾಟೀಲ ಶಾಲೆಯ ಸ್ನೇಹಾ ಮತ್ತು ಸಾಕ್ಷಿ ಪ್ರಾರ್ಥಿಸಿದರು. ವಿ.ಡಿ.ಐಹೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

