ತಾಳಿಕೋಟೆ : ಭಾರತದ ಪರಂಪರೆಯನ್ನು ಸ್ವಾಮಿ ವಿವೇಕಾನಂದರಂತೆ ಶ್ರೀ ಸಿದ್ದೇಶ್ವರ ಸ್ವಾಮಿಗಳು ಜಗತ್ತಿನ ಹಲವು ದೇಶಗಳಲ್ಲಿ ಪ್ರವಚನದ ಮೂಲಕ ಜ್ಞಾನ ದೀವಿಗೆ ಬೆಳಗಿಸಿ ವಿಜಯಪುರದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಪಡೆದಿದ್ದು ಸ್ವತಃ: ಸರಳ ಜೀವನವನ್ನು ಅಳವಡಿಸಿಕೊಂಡು ಮನುಕುಲಕ್ಕೆ ಸರಳ ಬದುಕಿನ ಸೂತ್ರವನ್ನು ತಿಳಿಸಿದ್ದಾರೆ ಎಂದು ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ದೆಯ ಅಧ್ಯಕ್ಷರು ಶ್ರೀ ಎಸ್ ಎಮ್ ಸಜ್ಜನ ಹೇಳಿದರು.
ದಿನಾಂಕ 02-01-2026 ರಂದು ಪಟ್ಟಣದ ಮಿಣಜಗಿ ಕ್ರಾಸ್ ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಿದ್ದೇಶ್ವರ ಸ್ವಾಮಿಗಳ ನಡೆ-ನುಡಿ ಮತ್ತು ಆಚಾರ-ವಿಚಾರಗಳು ಮನುಕುಲಕ್ಕೆ ದಾರಿ ದೀಪವಾಗಿವೆ ಎಂದರು.
ಪ್ರಾಚಾರ್ಯರಾದ ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಾತನಾಡಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸರಳತೆ, ಶಿಸ್ತು ಮತ್ತು ಅಪಾರವಾದ ಜ್ಞಾನ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದ್ದು ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ನಿರಂತರ ಅಧ್ಯಯನದಿಂದ ಜೀವನದ ಗುರಿ ಸಾಧಿಸಲು ಇಂತಹ ಪುಣ್ಯಪುರುಷರ ಜೀವನ ಸಂದೇಶವನ್ನು ಅರಿಯಬೇಕು ಎಂದರು. ಉಪನ್ಯಾಸಕರಾದ ಜಿ.ಎನ್.ಪಾಟೀಲ್, ಬಿ.ಡಿ.ಗುಮಶೆಟ್ಟಿ ಮಾತನಾಡಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ವಿಚಾರಧಾರೆಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಮ್.ಐ.ಬಡಿಗೇರ, ಎನ್.ಎಮ್.ಕೊಣ್ಣೂರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

