ಆರೋಗ್ಯ ಸಂಪತ್ತು ಇಲ್ಲದಿದ್ದರೆ ನೀವು ಎಷ್ಟು ಗಳಿಸಿದರೂ ಉಪಯೋಗವಿಲ್ಲ. ಸಂಪತ್ತು ಗಳಿಕೆಗೆ ಆದ್ಯತೆ ನೀಡದೆ ಆರೋಗ್ಯದ ಕಡೆ ಗಮನ ನೀಡಿ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕಡಲಬಾಳು ಗ್ರಾಮದ ಶಾಖಾ ಗವಿಮಠದ ಪೀಠಾಧಿಪತಿ ಮರಿಶಾಂತವೀರ ಸ್ವಾಮೀಜಿ ಪುರಪ್ರವೇಶ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಪತ್ತು ಗಳಿಸಿದ ಬಳಿಕ ಅದನ್ನು ಅನುಭವಿಸಲು ಆರೋಗ್ಯವೇ ಇಲ್ಲ ಎಂದ ಮೇಲೆ ಉಪಯೋಗವಿಲ್ಲ ಎಂದರು.
ಪರಿಸರ ನಮಗೆ ಎಲ್ಲ ಕೊಟ್ಟಿದ್ದು, ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಶಾಖಾ ಗವಿಮಠದ ಪೀಠಾಧಿಪತಿ ಮರಿಶಾಂತವೀರ ಸ್ವಾಮೀಜಿ ಈಗ ನಿಮ್ಮ ಗ್ರಾಮದ ಪುತ್ರನಿದ್ದಂತೆ. ಅವರ ಸೇವೆ ಗ್ರಾಮಕ್ಕೆ ಅಗತ್ಯವಾಗಿದ್ದು, ಭಕ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಕೆ.ನೇಮಿರಾಜ್ ನಾಯ್ಕ ಧರ್ಮಸಭೆ ಉದ್ಘಾಟಿಸಿ, ಕೊಪ್ಪಳದ ಗವಿಮಠದ ಮಹಾಸ್ವಾಮಿಗಳ ಆಗಮನ ಮತ್ತು ಮರಿಸ್ವಾಮೀಜಿಯವರ ಪಟ್ಟಾಧಿಕಾರ ನಿಮ್ಮ ಗ್ರಾಮವನ್ನು ಪಾವನಗೊಳಿಸಿದೆ. ಇತ್ತೀಚೆಗೆ ನಡೆದ ಕೊಪ್ಪಳ ಜಾತ್ರೆ ಎರಡನೇ ಕುಂಭಮೇಳದಂತೆ ಕಂಡುಬಂದಿತು. ಮುಂದೊಂದುದಿನ ಕಡಲಬಾಳು ಅಂತಹ ತಾಣವಾಗಲಿ, ಧಾರ್ಮಿಕ ಕ್ಷೇತ್ರ ಬೆಳೆಯಲಿ, ಅಕ್ಷರ, ಅನ್ನದಾಸೋಹ ನಡೆಯಲಿ ಎಂದರು.
ಶಾಖಾ ಮಠದ ಮರಿ ಶಾಂತವೀರ ಸ್ವಾಮೀಜಿ ಮಾತನಾಡಿ, ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೆ ಬದುಕುವ ಅವಕಾಶ ಇದೆ. ಪ್ರತಿಯೊಂದು ಜೀವಿಯೂ ಋಣಭಾರ ತೀರಿಸುವ ತವಕದಲ್ಲಿದ್ದರೆ. ಮನುಷ್ಯ ಮಾತ್ರ ಬರುವಾಗ ಋಣವನ್ನು ಹೊತ್ತುತರುತ್ತಾನೆ, ಋಣ ಭಾರ ಹೊತ್ತುಕೊಂಡು ಬದುಕುತ್ತಾನೆ. ಹೋಗುವಾಗ ಸಮಾಜದ ಋಣ ತೀರಿಸುವುದನ್ನೇ ಮರೆತು ಬಿಡುತ್ತಾನೆ. ವೈಯಕ್ತಿಕವಾಗಿ ನನ್ನ ಮೇಲೆ ಋಣ ಭಾರವಿದೆ. ಋಣ ತೀರಿಸಲು ಕೊಟ್ಟಿರುವ ಜವಾಬ್ದಾರಿ ನಿಭಾಯಿಸಲು ಶ್ರಮಿಸುವೆ ಎಂದರು.
ನೀಲಗುಂದ ಮಠದ ಚನ್ನಬಸವ ಶಿವಯೋಗಿ, ಹೆಬ್ಬಾಳು ನಾಗಭೂಷಣ ಶಿವಾಚಾರ್ಯ, ಸೊನ್ನದ ಶಿವಾನಂದ ಸ್ವಾಮೀಜಿ, ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ ಮಾತನಾಡಿದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಜನ್ನು ನಾಗರಾಜ, ಬಿ.ಗಂಗಣ್ಣ, ನವೀನ್ ಕುಮಾರ್, ಪ್ರಮುಖರಾದ ಕನ್ನಿಹಳ್ಳಿ ಚಂದ್ರಶೇಖರ್, ಕೃಷ್ಣಮೂರ್ತಿ ಶೆಟ್ರು, ಐಟಿ ಕೊಟ್ರೇಶ್, ಗವಿಸಿದ್ದಪ್ಪ, ಬ್ಯಾಟಿ ನಾಗರಾಜ, ಶಿವಕುಮಾರ ಭಟ್ರು ಇದ್ದರು.

