ನಗರದ ಆಳಂದ ಚೆಕ್ಪೋಸ್ಟ್ನಲ್ಲಿರುವ ರಾಮತೀರ್ಥ ಮಂದಿರದ ಶಿವಲಿಂಗಕ್ಕೆ ಮುಸ್ಲಿಮರಿಂದ ಪುಷ್ಪಾಲಂಕಾರ ಮಾಡಿದ್ದನ್ನು ಖಂಡಿಸಿ ಹಿಂದೂ ಜಾಗೃತಿ ಸೇನೆ ಮುಖಂಡರು ಸೋಮವಾರ ಕ್ಷೀರಾಭಿಷೇಕ, ಜಲಾಭಿಷೇಕ, ಗೋಮೂತ್ರದಿಂದ ‘ಶುದ್ಧೀಕರಣ’ ಮಾಡಿದರು.ಇತಿಹಾಸ ಪ್ರಸಿದ್ಧ ಶಿವಲಿಂಗವನ್ನು ಮಹಾಶಿವರಾತ್ರಿ ಅಂಗವಾಗಿ ‘ಅನ್ಯಕೋಮಿನ’ ಹಾಗೂ ‘ಗೋಮಾಂಸ ತಿನ್ನುವವರಿಂದ’ ಪುಷ್ಪಾಲಂಕಾರ ಮಾಡಿಸಿದ ವಿಡಿಯೊ ಭಾನುವಾರ ಹರಿದಾಡಿತ್ತು.ಈ ಬೆನ್ನಲ್ಲೆ ‘ಗೋವನ್ನು ತಾಯಿಯಾಗಿ ಪೂಜಿಸುವ ಧರ್ಮ ನಮ್ಮದು. ಆದರೆ, ಈ ದೇವಸ್ಥಾನದ ಟ್ರಸ್ಟ್ ಸದಸ್ಯರು ಗೋವು ಕಡಿದು ತಿನ್ನುವವರಿಂದ ಮಂದಿರದ ಗರ್ಭ ಗುಡಿಯೊಳಗೆ ಪುಷ್ಪಾಲಂಕಾರ ಮಾಡಿಸಿದ್ದಾರೆ. ಇದರಿಂದ ಐತಿಹಾಸಿಕ ಶಿವಲಿಂಗ ಅಪವಿತ್ರವಾಗಿದೆ’ ಎಂದು ಹಿಂದೂ ಜಾಗೃತಿ ಸೇನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

