ಇಂದಿನ ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ. ಅಲ್ಲಿನ ದಟ್ಟಾರಣ್ಯದಲ್ಲಿ ಶಿವಲಿಂಗವೊಂದಿತ್ತು. ಅರ್ಚಕರೊಬ್ಬರು ಪ್ರತಿದಿನ ವಿಧಿವತ್ತಾಗಿ ಪೂಜೆ ಸಲ್ಲಿಸುತ್ತಿದ್ದರು . ಆ ಕಾಡಿನಲ್ಲೇ ಬೇಡರ ಗುಂಪೊಂದು ವಾಸವಾಗಿತ್ತು. ಅದರ ಮುಖ್ಯಸ್ಥನೇ ಕಣ್ಣಪ್ಪ (ತಿನ್ನ) . ಒಂದು ದಿನ ಬೇಟೆಯಾಡಲು ಬಂದ ಕಣ್ಣಪ್ಪ, ಆ ದೇವಸ್ಥಾನವನ್ನು ಪ್ರವೇಶಿಸಿದ. ಲಿಂಗವನ್ನು ನೋಡಿದ ಕೂಡಲೇ ಆತನ ಮನಸ್ಸಿನಲ್ಲಿ ಅಪಾರವಾದ ಶಿವಭಕ್ತಿ ಉಕ್ಕಿ ಹರಿಯಿತು .
ಅಂದಿನಿಂದ, ಪ್ರತಿನಿತ್ಯ ಬೇಟೆಯಾಡಿದ ಮಾಂಸವನ್ನೇ ತನ್ನ ಪ್ರೀತಿಯ ಶಿವನಿಗೆ ನೈವೇದ್ಯ ಮಾಡಲು ಆರಂಭಿಸಿದ. ಬಾಯಲ್ಲಿ ತುಂಬಿಕೊಂಡು ತಂದ ನೀರಿನಿಂದ ಅಭಿಷೇಕ ಮಾಡುತ್ತಿದ್ದ. ಆತನಿಗೆ ಪೂಜಾ ವಿಧಾನಗಳು ಗೊತ್ತಿರಲಿಲ್ಲ; ಅವನ ಬಳಿ ಇದ್ದದ್ದು ಅಪಾರ ಪ್ರೇಮ ಮಾತ್ರ . ಕಣ್ಣಪ್ಪನ ಈ ಕ್ರಮದಿಂದ ಅರ್ಚಕರಿಗೆ ತುಂಬಾ ಬೇಸರವಾಗುತ್ತಿತ್ತು. ಏಕೆಂದರೆ ಪ್ರತಿದಿನ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಅಲ್ಲಿ ಮಾಂಸ, ರಕ್ತದ ಕಲೆಗಳು ಕಂಡುಬರುತ್ತಿದ್ದವು .
ಪರೀಕ್ಷೆ ಮತ್ತು ಶಿವನ ಅನುಗ್ರಹ
ಒಂದು ದಿನ, ಅರ್ಚಕರು ಪೂಜೆ ಸಲ್ಲಿಸುತ್ತಿರುವಾಗ ಲಿಂಗದ ಮೇಲೆ ಎರಡು ಕಣ್ಣುಗಳು ಕಾಣಿಸಿಕೊಂಡವು. ಸ್ವಲ್ಪ ಸಮಯದಲ್ಲೇ ಆ ಕಣ್ಣುಗಳಿಂದ ರಕ್ತ ಸೋರಲಾರಂಭವಾಯಿತು. ಭಯಗೊಂಡ ಅರ್ಚಕರು ಅದನ್ನು ಅಪಶಕುನವೆಂದು ಭಾವಿಸಿ ಸ್ಥಳದಿಂದ ಓಡಿಹೋದರು . ರಾತ್ರಿ ಬಂದ ಕಣ್ಣಪ್ಪ, ತನ್ನ ಪ್ರಿಯ ಶಿವನ ಕಣ್ಣುಗಳಿಂದ ರಕ್ತ ಸೋರುವುದನ್ನು ಕಂಡು ವ್ಯಥೆಗೊಳಗಾದ. ತನ್ನ ಬಳಿ ಇದ್ದ ಗಿಡಮೂಲಿಕೆಗಳನ್ನು ಹಚ್ಚಿದನಾದರೂ ರಕ್ತಸ್ರಾವ ನಿಲ್ಲಲಿಲ್ಲ .
ತನ್ನ ಪ್ರಭುವಿನ ನೋವು ನೋಡಲಾರದೆ, ಆತ ತನ್ನ ಬಾಣದಿಂದ ತನ್ನ ಒಂದು ಕಣ್ಣನ್ನು ಕಿತ್ತು ಲಿಂಗದ ರಕ್ತಸ್ರಾವವಾಗುತ್ತಿರುವ ಕಣ್ಣಿನ ಮೇಲೆ ಇಟ್ಟ. ರಕ್ತಸ್ರಾವ ನಿಂತಿತು. ಆದರೆ ಸ್ವಲ್ಪ ಸಮಯದಲ್ಲೇ ಲಿಂಗದ ಇನ್ನೊಂದು ಕಣ್ಣೂ ರಕ್ತ ಸುರಿಸಲಾರಂಭಿಸಿತು . ಈಗ ಕಣ್ಣಪ್ಪನ ಸಮಸ್ಯೆ ಎಂದರೆ, ತನ್ನ ಇನ್ನೊಂದು ಕಣ್ಣನ್ನೂ ಕಿತ್ತು ಲಿಂಗದ ಮೇಲಿಟ್ಟರೆ, ತನಗೆ ಕಾಣಿಸುವುದಿಲ್ಲವಲ್ಲ ಎಂಬುದು. ತಕ್ಷಣವೇ ಆತ ತನ್ನ ಕಾಲಿನ ಹೆಬ್ಬೆರಳನ್ನು ರಕ್ತಸ್ರಾವವಾಗುತ್ತಿರುವ ಎರಡನೇ ಕಣ್ಣಿನ ಮೇಲಿಟ್ಟು ಗುರುತು ಮಾಡಿಕೊಂಡು, ತನ್ನ ಉಳಿದ ಕಣ್ಣನ್ನೂ ಕಿತ್ತುಕೊಳ್ಳಲು ಸಿದ್ಧನಾದ .
ಶಿವನ ಒಲುಮೆ
ಇಷ್ಟು ದೊಡ್ಡ ತ್ಯಾಗ, ಅಪಾರ ಪ್ರೇಮ ಕಂಡು ಶಿವನು ಪುಳಕಿತನಾದ. ಕೂಡಲೇ ಪ್ರತ್ಯಕ್ಷನಾಗಿ ಕಣ್ಣಪ್ಪನ ಕೈಹಿಡಿದು ತಡೆದನು. ಆತನ ಭಕ್ತಿಗೆ ಮೆಚ್ಚಿ, ಅವನಿಗೆ ಕಣ್ಣುಗಳನ್ನು ಮರಳಿ ನೀಡಿ, ಮುಕ್ತಿಯನ್ನು ಅನುಗ್ರಹಿಸಿದನು . ಕಣ್ಣಪ್ಪನನ್ನು ತಮ್ಮ ಪರಮ ಭಕ್ತರಲ್ಲಿ ಒಬ್ಬರಾಗಿ ಸ್ವೀಕರಿಸಿದನು . ಅಂದಿನಿಂದ ಈತನು ನಾಯನ್ಮಾರ್ (ಶೈವ ಸಂತರು) ಪಟ್ಟವನ್ನು ಪಡೆದು ಪೂಜಿಸಲ್ಪಡುತ್ತಾನೆ .
ಈ ಘಟನೆಯೇ ಭಕ್ತಿ-ವಿಶ್ವಾಸಗಳ ಸಂಕೇತವಾಗಿ ಮಹಾಶಿವರಾತ್ರಿಯಂದು ಸ್ಮರಿಸಲ್ಪಡುತ್ತದೆ. ಈ ಕಥೆಯು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಹು ಜನಪ್ರಿಯವಾಗಿದೆ.
ಬೇಡರ ಕಣ್ಣಪ್ಪನ ಕಥೆ ನಮಗೆ ಕಲಿಸುವ ಸಂದೇಶವೆಂದರೆ, ದೇವರನ್ನು ಮುಟ್ಟಲು ವಿದ್ಯೆ, ಆಚಾರಗಳಿಗಿಂತ ಪ್ರಾಮಾಣಿಕ ಭಾವ ಮತ್ತು ನಿಷ್ಕಲ್ಮಶ ಪ್ರೇಮವೇ ಮುಖ್ಯ. ದೇವರು ಭಾವಪ್ರಿಯನೇ ಹೊರತು ಬಾಹ್ಯಪ್ರಿಯನಲ್ಲ ಎಂಬುದಕ್ಕೆ ಬೇಡರ ಕಣ್ಣಪ್ಪನೇ ಸಾಕ್ಷಿಯಾಗಿದ್ದಾನೆ .
ಆಂಜನೇಯ ನಸಲಾಪುರ ಉಪನ್ಯಾಸಕರು

