ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಮದ ಗ್ರಾಮ ಪಂಚಾಯತ್ ದಲ್ಲಿ ನಡೆದ ಭ್ರಷ್ಟಾಚಾರ ಆರೋಪದ ತನಿಖೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 11ರಂದು ಕಲಕೇರಿಯಿಂದ ವಿಜಯಪುರ ದವರೆಗೆ ನಡೆಯಲಿರುವ ಪಾದಯಾತ್ರೆ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ ಬಣ)ಕಲಕೇರಿ ವಲಯ ಸಂಚಾಲಕ ಸೋಮಶೇಖರ ಪಿ.ಬಡಿಗೇರ ನೇತೃತ್ವದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಇವರಿಗೆ ಮನವಿ ಸಲ್ಲಿಸಲಾಯಿತು.ಮನವಿ ಪತ್ರದಲ್ಲಿ ಕಲ್ಕೇರಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಭ್ರಷ್ಟಾಚಾರವನ್ನು ತನಿಖೆ ನಡೆಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 23ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಧರಣಿ ಸ್ಥಳಕ್ಕೆ ತಹಸಿಲ್ದಾರ ಅವರು ಆಗಮಿಸಿ ಮಾತುಕತೆ ನಡೆಸಿ ಒಂದು ವಾರದ ಒಳಗೆ ಸಂಬಂಧಿಸಿದ ಅಧಿಕಾರಿಗಳು ಹೋರಾಟಗಾರರಿಗೆ ವರದಿ ನೀಡುವಂತೆ ಸೂಚನೆ ನೀಡಿ ಅಲ್ಲಿಯವರೆಗೆ ಧರಣಿ ಸ್ಥಗಿತಗೊಳಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಧರಣಿ ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು. ಇದೀಗ ಕೊಟ್ಟ ವಾಯ್ದೆಯ ಅವಧಿ ಮುಗಿದು ಹೋಗಿದ್ದು ಇಲ್ಲಿವರೆಗೆ ಯಾವುದೇ ವರದಿ ಕೊಟ್ಟಿಲ್ಲ ಜೊತೆಗೆ ಸೂಕ್ತ ಸ್ಪಂದನೆಯೂ ಸಿಕ್ಕಿಲ್ಲ ಆದಕಾರಣ ಸಂಘಟನೆಯ ಪದಾಧಿಕಾರಿಗಳ ನಿರ್ಣಯದಂತೆ ಫೆಬ್ರವರಿ 11ರಂದು ಕಲಕೇರಿ- ವಿಜಯಪುರ ದವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಸದರಿ ಪಾದಯಾತ್ರೆಯು ಫೆಬ್ರವರಿ 11ರಂದು ಬೆಳಿಗ್ಗೆ 10:00 ಗಂಟೆಗೆ ಕಲ್ಕೇರಿಯ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ವಿವಿಧ ಗ್ರಾಮಗಳ ಮೂಲಕ ಹಾದು ಫೆಬ್ರವರಿ 14ರಂದು ವಿಜಯಪುರ ನಗರಕ್ಕೆ ತಲುಪಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಕಾರ್ಯಕ್ರಮದ ಯಶಸ್ವಿಗೆ ಅನುಮತಿ ನೀಡಬೇಕೆಂದು ವಿನಂತಿಸಲಾಗಿದೆ. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

