ಈಗಾಗಲೇ ಭತ್ತ ಕಟಾವು ಎಲ್ಲೆಡೆ ನಡೆದಿದೆ. ಆದರೆ ಇದುವರೆಗೂ ಕೂಡ ಭತ್ತ ಖರೀದಿ ಕೇಂದ್ರ ತೆಗೆಯುತ್ತಿಲ್ಲ ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷವೇ ಕಾರಣ ಅಕಾಲಿಕ ಮಳೆಯಿಂದಾಗಿ ನಾಶವಾಗಿದ್ದ ಬೆಳೆಗಳನ್ನು ಬರೀ ವೀಕ್ಷಣೆ ಮಾಡಿದರೆ ಹೊರತು, ಸರ್ವೇ ಮಾಡಿ ಡಾಟಾ ಎಂಟ್ರಿ ಮಾಡಿಲ್ಲ. ಈಗ ಎರಡನೇ ಬೆಳೆಗೆ ನೀರು ಕೊಡುವುದಿಲ್ಲ ರೈತರು ಸಹಕರಿಸಬೇಕು ಅಂತಿದಾರೆ ಎಂದು ಜೆಡಿಎಸ್ ಮುಖಂಡ ಚಂದ್ರುಭೂಪಾಲ್ ನಾಡಗೌಡ ಸರ್ಕಾರದ ವಿರುದ್ಧ ಚಾಟಿ ಬೀಸಿದರು.
ಇಷ್ಟು ದಿವಸ ತುಂಗಭದ್ರಾ ಡ್ಯಾಮ್ ಕ್ರಸ್ಟ್ ಗೇಟ್ ಗಳ ಬಗ್ಗೆ ಮಾತನಾಡುತ್ತಿದ್ದರು. ಗೇಟ್ ಗಳನ್ನು ಕೂಡಿಸಲಿಕ್ಕೆ ಕೆಲವು ತಿಂಗಳು ಬೇಕೆಂದು, ಯಾವಾಗ ಡ್ಯಾಮ್ ಗೇಟ್ ಗಳ ತಜ್ಞ ಕನ್ನಯ್ಯನಾಯ್ಡು ಗೇಟ್ ಗಳನ್ನು ಕೂಡಿಸಲು 3 ತಿಂಗಳು ಸಾಕು, ಹಿಂಗಾರಿನ ಎರಡನೇ ಬೆಳೆಗೆ ನೀರು ಕೊಡಬಹುದು ಎಂದು ಸರ್ಕಾರಕ್ಕೆ ಪತ್ರ ಬರೆದರು. ಆವಾಗಿನಿಂದ ಗೇಟ್ ಗಳ ಬಗ್ಗೆ ಮಾತನಾಡುವುದು ಬಿಟ್ಟರು. ಇವಾಗ ಡ್ಯಾಮ್ ನಲ್ಲಿ ನೀರಿಲ್ಲ ಅಂತ ಹೇಳುತ್ತಿದ್ದಾರೆ.
ಇವತ್ತಿಗೂ ನಮ್ಮ ಭಾಗದ 33 ಟಿಎಮ್ ಸಿ ನೀರು ಉಳಿದಿದೆ. ಪ್ರತಿಸಾರಿ ನೀರು ಕಮ್ಮಿಯಾದರೆ, ಭದ್ರಾದಿಂದ ಐದಾರು ಟಿಎಮ್ ಸಿ ನೀರನ್ನು ಬಿಡಿಸಿ ಎರಡನೇ ಬೆಳೆಗೆ ಕೊಟ್ಟ ಉದಾಹರಣೆಗಳಿವೆ. ಭದ್ರಾ ಜಲಾಶಯ ತುಂಬಿದೆ. 10 ಟಿಎಮ್ ಸಿ ನೀರು ತರುವ ಅವಕಾಶಗಳಿವೆ. ಈಗಾಗಲೇ ಮಾಜಿ ಸಚಿವರು ಹಾಗೂ ಕೆಒಎಫ್ ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ ಮತ್ತು ಅವರ ಸಹಪಾಠಿಗಳು ಎಲ್ಲರೂ ಹೈದ್ರಾಬಾದ್ ಗೆ ಹೋಗಿ ಡ್ಯಾಮ್ ಗಳ ತಜ್ಞ ಕನ್ನಯ್ಯನಾಯ್ಡು ಅವರನ್ನು ಭೇಟಿ ಮಾಡಿ, ನೀರಿನ ಬಗ್ಗೆ ಗೇಟ್ ಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಬಂದಿದ್ದಾರೆ.
ಬಂದ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಶರಣುಪ್ರಕಾಶ ಪಾಟೀಲ್, ತಂಗಡಗಿ, ಎನ್.ಎಸ್.ಭೋಸರಾಜ ಅವರ ಜೊತೆಗೆ ಮಾತನಾಡಿದ್ದಾರೆ. ಅವರಿಂದ ನೀರಿದ್ದರೆ ಕೊಡಬಹುದೆಂಬ ಮಾತುಗಳನ್ನಾಡಿದ್ದಾರೆ. ನ.14 ರಂದು ನಡೆದ ಐಸಿಸಿ ಸಭೆಯಲ್ಲೂ ಕೂಡ ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಹಾಗಾದರೆ ರೈತರ ಪರಿಸ್ಥಿತಿ ಏನು ! ಒಂದು ಕಡೆ ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗಿವೆ. ಇನ್ನೊಂದು ಕಡೆ ಎರಡನೇ ಬೆಳೆ ಇಲ್ಲ. ಇದರಿಂದಾಗಿ ಸರಿಸುಮಾರು 10 ಸಾವಿರ ಕೋಟಿಗೂ ಹೆಚ್ಚು ಲಾಸ್ ಆಗುತ್ತದೆಂದು ಕಳವಳ ವ್ಯಕ್ತಪಡಿಸಿದರು.
(ಬಾಕ್ಸ್: ನ.25ಕ್ಕೆ ಸಿಂಧನೂರಿಗೆ ನಿಖಿಲ್ ಕುಮಾರಸ್ವಾಮಿ ಆಗಮನ
ನ.25 ಕ್ಕೆ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಎರಡನೇ ಬೆಳೆಯ ನೀರಿಗಾಗಿ ಅಂದು ಸಾವಿರಾರು ರೈತರ ಸಮ್ಮುಖದಲ್ಲಿ ಸಿಂಧನೂರು ನಗರದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ನಡೆಯನ್ನು ವಿರೋಧಿಸಿ ಹಿಂಗಾರು ಬೆಳೆಗೆ ನೀರು ಬಿಡಲು ಒತ್ತಾಯಿಸಲಿದ್ದಾರೆ ಎಂದರು.
ಈ ವೇಳೆ: ರವಿಕುಮಾರ ಪನ್ನೂರು, ಅಶೋಕಗೌಡ ಗದ್ರಟಗಿ, ಜಿಲಾನಿ ಪಾಷಾ, ಚಂದ್ರಶೇಖರ್ ಮೈಲಾರ್, ಕೃಷ್ಣಮೂರ್ತಿ, ಎಸ್.ಬಿ.ಟೇಲರ್, ಸೈಯಾದ್ ಆಶೀಫ್, ಸೇರಿದಂತೆ ಅನೇಕರಿದ್ದರು.

