ರಾಯಚೂರು ಡಿಸೆಂಬರ್ 30 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಅಬಕಾರಿ ಇಲಾಖೆ, ಪೋಲಿಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯಿಂದ ನಗರದ ಯಕ್ಲಸ್‌ಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 29ರಂದು ಸಿಹೆಚ್ ಪೌಡರ್, ಕಲಬೆರೆಕೆ ಸೇಂದಿ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಮನೋರೋಗ ತಜ್ಞರಾದ ಡಾ.ಮನೋಹರ್ ಪತ್ತಾರ ಅವರು ಮಾತನಾಡಿ, ಸೇಂದಿ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮಗಳಾಗಲಿವೆ. ತಲೆನೋವು, ನಿದ್ರಾಹೀನತೆ, ವಾಕರಿಕೆ, ನರದೌರ್ಬಲ್ಯ, ಅಸಹಜ ಹೃದಯ ಲಯಗಳ ಮತ್ತು ಆಂತರಿಕ ರಕ್ತಸ್ರಾವ ಹಾಗೂ ಕ್ಯಾನ್ಸರ್ ಮುಂತಾದ ಆರೋಗ್ಯ ಸಮಸ್ಯೆಗಳು ಹಾಗೂ ಚಿತ್ತಚೆಂಚಲತೆ, ಜ್ಞಾಪಕ ಶಕ್ತಿ ಕ್ಷಿಣಿಸುವುದು, ಖಿನ್ನತೆ ಹಾಗೂ ಅತ್ಮಹತ್ಯೆಯ ಆಲೋಚನೆಗಳು ಮುಂತಾದ ಮಾನಸಿಕ ಕಾಯಿಲೆಗಳು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುತ್ತವೆ ಎಂದರು.
ಮಾದಕ ವಸ್ತುಗಳ ಸೇವನೆಯಿಂದ ಯುವಜನತೆಗೆ ದೂರ ಇರುವಂತೆಯು ಹಾಗೂ ಚಟಗಳಿಗೆ ಬಲಿಯಾದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವ ಅವಕಾಶಗಳಿದ್ದು, ಡಿ-ಆಡಿಕ್ಷನ್ ಸೆಂಟರ್‌ಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
ಈ ವೇಳೆ ರಿಮ್ಸ್ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞರಾದ ಡಾ.ರಮೇಶ ಬಾಬು ಅವರು ಮಾತನಾಡಿ, ಸೇಂದಿಯ ಬಗ್ಗೆ ಇರುವ ಮೌಡ್ಯತೆಯಿಂದ ನಾವು ಹೊರ ಬರಬೇಕು ಎಂದರು.
ಈ ವೇಳೆ ಗ್ರಾಮೀಣ ಠಾಣೆಯ ಆರಕ್ಷಕರಾದ ಸಾಬಯ್ಯ ಅವರು ಮಾತನಾಡಿ, ಸೇಂದಿ ಸೇವನೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ತಯ್ಯ ಹಾಳು ಮಾಡುತ್ತಿರುವ ಸೇಂದಿ ಮತ್ತು ಮುಂತಾದ ಮಾದಕ ವಸ್ತುಗಳ ಉತ್ಪಾದನೆ, ತಯಾರಿಸುವಿಕೆ, ಕಳ್ಳಸಾಗಾಣೆ ಮತ್ತು ಮಾರಾಟ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ, ಅಬಕಾರಿ ಇಲಾಖೆ, ಎನ್.ಸಿ.ಬಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ನೇಮಿಸಿರುವಂತಹ ಏಜೆನ್ಸಿಗಳು ಕಾರ್ಯ ಪ್ರವೃತ್ತವಾಗಿವೆ. ಇತ್ತಿಚಿನ ದಿನಗಳಲ್ಲಿ ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇಂದಿ ಮಾರಾಟಕ್ಕೆ ಸಂಬಂಧಪಟ್ಟಂತ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಲ್ಲಿ ಏನೆಲ್ಲಾ ಶಿಕ್ಷೆ, ದಂಢನೆಗಳಿವೆ ಎಂದು ಸಹವಿವರವಾಗಿ ಕಾನೂನಿನ ಅರಿವು ಮೂಡಿಸಿದರು. ಅಲ್ಲದೆ ಸೇಂದಿ ಹಾಗೂ ಮಾದಕ ವಸ್ತು ಸಂಬಂಧಿ ಅಪರಾಧಗಳು ಕಂಡು ಬಂದ ಪಕ್ಷದಲ್ಲಿ ಪೋಲಿಸ್ ಮತ್ತು ಅಬಕಾರಿ ಇಲಾಖೆಗೆ ಮಾಹಿತಿಯನ್ನು ನೀಡಿ ಅಪರಾಧಗಳನ್ನು ತಡೆಯುವಲ್ಲಿ ಸಹಕರಿಸುವಂತೆ ಕೋರಿದರು.
ಈ ವೇಳೆ ಅಬಕಾರಿ ನಿರೀಕ್ಷಕರಾದ ಸರಸ್ವತಿ ಅವರು ಮಾತನಾಡಿ, ಹವ್ಯಾಸಗಳು ಯುವ ಜನತೆಗೆ ಬದುಕನ್ನು ಕಟ್ಟಿಕೊಡುತ್ತವೆ. ಮತ್ತು ಚಟಗಳು ಬದುಕನ್ನು ಕೆಡಿಸುತ್ತವೆ. ಆದುದ್ದರಿಂದ ಇಂದಿನ ಯುವ ಜನತೆ ಸಂಗೀತ, ಸಾಹಿತ್ಯ ರಚನೆ, ಕ್ರೀಡೆ ಮುಂತಾದ ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಂಡು ಒಳ್ಳೆಯ ರೀತಿಯ ಸಾಧನೆ ಮಾಡಿ ಬದುಕು ರೂಪಿಸಿಕೊಳ್ಳಬೇಕು. ಮತ್ತು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆಸ್ತಿಯಾಗಿ ಬೆಳೆಯಬೇಕು ಎಂದರು.
ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವ ಕೆಟ್ಟ ಚಟಗಳ ಹಿಂದೆ ಬಿದ್ದು ಸುಂದರ ಭವಿಷ್ಯವನ್ನು ಹಾಳುಮಾಡಿಕೊಂಡು ಕುಟುಂಬ ಸಮಾಜಕ್ಕೆ ಹೊರೆಯಾಗಬಾರದು ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ತಿಮ್ಮಪ್ಪ ನಾಯಕ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ರಾಜಶೇಖರ ಯಕ್ಲಾಸ್‌ಪೂರ, ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾದ ಸತ್ಯನಾರಾಯಣ, ಅಬಕಾರಿ ಉಪ ನಿರೀಕ್ಷಕರಾದ ಯಲ್ಲನಾರಿಲು, ಮಹ್ಮದ್ ಹುಸೇನ್, ಅಮೃತ ಬಿಂದು ಸಿಬ್ಬಂದಿಗಳಾದ ಚಂದ್ರಕಾಂತ್, ಶಿವಾನಂದ, ತಿರುಪತಿ, ಯಂಕೋಬ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *