ಲಿಂಗಸಗೂರು.ಡಿ.16 : -ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ., ಸಿಂಧನೂರು ಇವರು ಜಾರಿಗೆ ತಂದಿರುವ ಸಿಂಧು ಶಿಶು ಸುರಕ್ಷಾ ಯೋಜನೆಯು ಸಾಮಾಜಿಕ ಬದ್ಧತೆಯ ಕಳಕಳಿಯ ಯೋಜನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಹೊನ್ನಪ್ಪ ಮೇಟಿ ಹೇಳಿದರು.
ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಜಾರಿಗೆ ತಂದಿರುವ ಸಿಂಧು ಶಿಶು ಸುರಕ್ಷಾ ಯೋಜನೆಯ ಕುರಿತು ಹಾಗೂ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಸಹಕಾರಿ ಸಂಘವು ಜನಸಾಮಾನ್ಯರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇಂತಹ ವಿಶಿಷ್ಟ ಹಾಗೂ ಸಾಮಾಜಿಕ ಬದ್ಧತೆಯ ಯೋಜನೆಯನ್ನು ಇದುವರೆಗೆ ಯಾವುದೇ ಸಹಕಾರಿಯೂ ಜಾರಿಗೆ ತಂದಿಲ್ಲ. ಈ ಯೋಜನೆ ರಾಜ್ಯಮಟ್ಟದಲ್ಲಿ ಪ್ರಚಾರ ಪಡೆದು ಇತರೆ ಸಹಕಾರಿಗಳಿಗೆ ಪ್ರೇರಣೆಯಾಗಬೇಕು ಇಂತಹ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದ ಬಡವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು ಜನರು ಇಂತಹ ಯೋಜನೆಯ ಲಾಭ ಪಡೆದು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕಾಗಿದೆ
ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಮಾತನಾಡಿ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ‘ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ’ಯನ್ನು ಹೋಲುವಂತೆ, ಸರ್ಕಾರಿ ಶಾಲೆಗಳ ಉಳಿವು ಹಾಗೂ ಹೆಣ್ಣು ಮಕ್ಕಳ ಭವಿಷ್ಯ ಭದ್ರತೆಗೆ ಸಿಂಧು ಸಹಕಾರಿಯು ರೂಪಿಸಿರುವ ಈ ಯೋಜನೆ ಪ್ರಧಾನಮಂತ್ರಿಗಳ ‘ಬೇಟಿ ಬಚಾವೋ – ಬೇಟಿ ಪಡಾವೋ’ ಯೋಜನೆಯ ಕನ್ನಡಿಯಾಗಿದೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂತ್ಯೋದಯ ನಿಧಿ ಹಾಗೂ ಸಾಲ ಸುರಕ್ಷಾ ಯೋಜನೆಯಡಿ ಮೃತರಾದ ಯಂಕಪ್ಪ ಚನ್ನದಾಸರ ಅವರ ವಾರಸುದಾರರಾದ ಶ್ರೀಮತಿ ದುರಗಮ್ಮ ಗಂಡ ಯಂಕಪ್ಪ ಅವರಿಗೆ ರೂ.75,000/- ಮೊತ್ತದ ಪರಿಹಾರ ಚೆಕ್ನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಸಹಕಾರಿಯ ಅಧ್ಯಕ್ಷರಾದ ರಾಜಶೇಖರ ಬಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಹನುಮಂತಪ್ಪ ಕ್ವಾರಿ, ತಾಲೂಕು ಜನಸಂಪನ್ಮೂಲ ಅಧಿಕಾರಿಗಳು ಹಾಗೂ ಸಹಕಾರಿಯ ಉಪಾಧ್ಯಕ್ಷರಾದ ಅಮರೇಶ ಹಟ್ಟಿ, ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಕಾರಿಯ ನಿರ್ದೇಶಕರುಗಳಾದ ವಿಜಯಕುಮಾರ್ ಛಾಜೇಡ್, ಬಸವರಾಜ ಬಿ, ಶಂಕರಗೌಡ, ರಾಮಪ್ಪ ಕೆ, ಮುಖ್ಯ ಕಾರ್ಯವಿರ್ವಾಹಕರು , ನಾಗರಹಾಳ ಶಾಖಾ ಸಿಬ್ಬಂದಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

