ರಾಯಚೂರು ಡಿಸೆಂಬರ್ 03 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಹತ್ತಿ ಬೆಳೆಗಾರರಿಂದ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ವತಿಯಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹತ್ತಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಹತ್ತಿ ಬೆಂಬಲ ಬೆಲೆಯ ಕಾರ್ಯಕ್ರಮದಡಿ ಖರೀದಿ ಕೇಂದ್ರಗಳು ಮತ್ತು ನೋಂದಣಿ ಪ್ರಕ್ರಿಯೆ ಭಾರತೀಯ ಹತ್ತಿ ನಿಗಮದಿಂದ ಜಿಲ್ಲಾದ್ಯಂತ ವಿವಿಧ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿಯವರೆಗೆ ಸುಮಾರು 27,929 ರೈತರು ಹತ್ತಿ ಬೆಂಬಲ ಬೆಲೆ ಯೋಜನೆಯಡಿ ಕಪಾಸ್ ಕಿಸಾನ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ನೋಂದಣಿ ಪ್ರಕ್ರಿಯೆ ಹಾಗೂ ಖರೀದಿ ದಿನಾಂಕವನ್ನು ಡಿಸೆಂಬರ್ 31 ರವರೆಗೆ ಜಾರಿಯಲ್ಲಿದ್ದು, ಎಲ್ಲಾ ರೈತರು ಕಡ್ಡಾಯ ನೊಂದಾಯಿಸಿಕೊಂಡು ಹತ್ತಿ ಬೆಂಬಲ ಬೆಲೆ ಯೋಜನೆಯ ಸವಲತ್ತನ್ನು ಪಡೆಯಬಹುದಾಗಿದೆ. ಕನಿಷ್ಠ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ, ಹತ್ತಿ ಮಾರಾಟದ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಆಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
