*ಬಳಗಾನೂರು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿ ಹುಸೇನಬಾಷಾ ಅವಿರೋಧ ಆಯ್ಕೆ*

ಮಸ್ಕಿ: ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿದ್ದ ಮಂಜುನಾಥಸ್ವಾಮಿ ರಾಜಿನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಸೇನಬಾಷಾ ಬೂದಗುಂಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಯಾದ ಮಂಜುನಾಥ ಭೋಗಾವತಿ ಶನಿವಾರ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಹುಸೇನಬಾಷಾ ಬೂದಗುಂಪಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ೧ ಗಂಟೆಗೆ ನಾಮಪತ್ರ ಪರೀಶೀಲನೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಹುಸೇನಬಾಷಾ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಪಟ್ಟಣ ಪಂಚಾಯತಿ ಒಟ್ಟು ೧೨ಜನ ಚುನಾಯಿತ ಸದಸ್ಯರನ್ನು ಹೊಂದಿದ್ದು, ಪ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ೫ ಜನ ಹಾಗೂ ಬಿಜೆಪಿಯಿಂದ ೬ ಜನ ಮತ್ತು ಒಬ್ಬರು ಪಕ್ಷೇತರ ಸದಸ್ಯರುಗಳಾಗಿ ಆಯ್ಕೆಯಾಗಿದ್ದರು.

ಈ ಹಿಂದೆ ನಡೆದ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಹುಸೇನ್‌ಬಾಷಾ ಕಾಂಗ್ರೇಸ್‌ಗೆ ಬೆಂಬಲ ನೀಡುವುದರ ಮೂಲಕ ಕಾಂಗ್ರೆಸ್ ಸೇರಿದ್ದರು.

ಸನ್ಮಾನ: ಮಸ್ಕಿ, ಸಿಂಧನೂರು ಕ್ಷೇತ್ರದ ಕಾಂಗ್ರೇಸ್ಸಿನ ವಿವಿಧ ಘಟಕಗಳ ಪಧಾಧಿಕಾರಿಗಳು ಪ.ಪಂ ಅಧ್ಯಕ್ಷರು, ಸದಸ್ಯರು ಮತ್ತು ಮುಖಂಡರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಮುದಾಯದ ಮುಖಂಡರುಗಳು ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹುಸೇನಬಾಷಾ ಅವರನ್ನು ಸನ್ಮಾನಿಸಿ ಗೌರವಿಸಿದರು. ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಪ.ಪಂ ಅಧ್ಯಕ್ಷ ಶಿವುಕುಮಾರ ನಾಯಕ, ಪ.ಪಂ ಮುಖ್ಯಾಧಿಕಾರಿ ಗೋಪಾಲ ನಾಯಕ, ಮಾಜಿ ಉಪಾಧ್ಯಕ್ಷ ಮಂಜುನಾಥಸ್ವಾಮಿ, ರಾಜಶ್ರೀ, ಸಂಜಯಕುಮಾರ, ಲತಾ ತಿರುಕನಗೌಡ, ಶಾಂತ ಹನುಮಂತ ಸೇರಿದಂತೆ ಕಾಂಗ್ರೇಸ್ ಸದಸ್ಯರು ಮತ್ತು ಕಾರ್ಯಕರ್ತರಿದ್ದರು.

ಉಪಾಧ್ಯಕ್ಷರಾಗಿ ಆಯ್ಕೆ ಮಾಡಲು ಕಾರಣಿಕಾರ್ಯರಾದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಪಟ್ಟಣ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ. –

*ಹುಸೇನಭಾಷಾ ಬೂದಗುಂಪಾ ನೂತನ ಉಪಾಧ್ಯಕ್ಷರು. ಪ.ಪಂ ಬಳಗಾನೂರು*

 

 

Leave a Reply

Your email address will not be published. Required fields are marked *