ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿನಿಯರಿಗಾಗಿ, ಕರ್ನಾಟಕ ರಾಜ್ಯ ಪ್ರಸೂತಿ ಹಾಗೂ ಸ್ತ್ರೀರೋಗ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ರೋಗಕ್ಕೆ ಸಂಬಂಧಸಿದ, ಅವರ ಸಮಸ್ಯೆಯಾದ ಮಾಸಿಕ ಋತುಚಕ್ರ ಕುರಿತು ಹಾಗೂ ಮಕ್ಕಳ ಆಹಾರ ಪದ್ಧತಿ ಮತ್ತು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ಥಳೀಯ ಅನುಭವಿ ವೈದ್ಯೆಯರಾದ ಡಾ.ಗಂಗಾಂಬಿಕಾ ಪಾಟೀಲ ಮತ್ತು ಡಾ. ವಿಜಯಲಕ್ಷ್ಮಿ ಹಜೇರಿ ಹಾಗೂ ಡಾ.ಮಧುಬಾಲಾ ಸಿಂಘಾಲ ಅವರು ಆರೋಗ್ಯಯುತ ಜೀವನ ಶೈಲಿ ಮತ್ತು ಬೊಜ್ಜು ತಡೆಗಟ್ಟುವ ವಿಧಾನಗಳ ಕುರಿತು ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಾ.ಸರೋಜಾ ವಿಜಯಕುಮಾರ ಕಾರ್ಚಿ, ಡಾ.ಪ್ರಿಯಾ ಆನಂದ ಭಟ್, ಸರ್ವಜ್ಞ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ಧನಗೌಡ ಬ.ಮಂಗಳೂರ, ಮುಖ್ಯ ಗುರುಗಳಾದ ಸಂತೋಷ ಪವಾರ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕುಮಾರಿ ಸ್ವಪ್ನ ದೇಸಾಯಿ ಮತ್ತು ಸ್ವರ್ಣ ಕುಲಕರ್ಣಿ ಪ್ರಾರ್ಥನೆ ಗೀತೆಯನ್ನು ಹಾಡಿದರು. ಶಿಕ್ಷಕ ರಾಜು ಜವಳಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.

