ರಾಯಚೂರು, ಜೂನ್ 13: ರಾಯಚೂರು ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಹೆಚ್ಚುವರಿ ಬಸ್ಗಳ ಸಂಚಾರ, ಆನ್ಲೈನ್ ಟಿಕೆಟ್ ವ್ಯವಸ್ಥೆ ಹಾಗೂ ನ್ಯಾಯಾಲಯ ಮತ್ತು ವಿಧಾನ ಸೌಧಕ್ಕೆ ನೇರ ಸಿಟಿ ಬಸ್ ಸೌಲಭ್ಯ ಕಲ್ಪಿಸುವಂತೆ AIMIM ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದೊಡ್ಡಿ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್ಗಳ ಕೊರತೆಯಿಂದ ವೃದ್ಧರು, ಮಹಿಳೆಯರು, ರೋಗಿಗಳು ಹಾಗೂ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ಗಳು ಲಭ್ಯವಾಗದೇ ಇರುವುದರಿಂದ ವಿದ್ಯಾರ್ಥಿಗಳು ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಸ್ತುತ ಬಸ್ಗಳಲ್ಲಿ ಟಿಕೆಟ್ ವಿತರಣೆಯ ಸಂದರ್ಭದಲ್ಲಿ ಚಿಲ್ಲರೆ ಹಣದ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಗೊಂದಲಗಳು ಉಂಟಾಗುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಫೋನ್ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಆಧಾರಿತ ಆನ್ಲೈನ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಇಕ್ಲಾಸ್ಪುರದಲ್ಲಿರುವ ವಿಧಾನ ಸೌಧ ಹಾಗೂ ದೇವದುರ್ಗ ನಗರದಲ್ಲಿರುವ ನೂತನ ನ್ಯಾಯಾಲಯಕ್ಕೆ ಸಾರ್ವಜನಿಕರು, ವಕೀಲರು ಮತ್ತು ಫಿರ್ಯಾದಿದಾರರು ಪ್ರತಿದಿನ ಸರ್ಕಾರಿ ಕೆಲಸಗಳಿಗಾಗಿ ಭೇಟಿ ನೀಡುತ್ತಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತು ವಿಧಾನ ಸೌಧದ ಆವರಣದವರೆಗೆ ನೇರ ಸಿಟಿ ಬಸ್ ಸೇವೆ ಆರಂಭಿಸಬೇಕೆಂದು ಮನವಿ ಮಾಡಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಿತ ಅಧಿಕಾರಿಗಳು ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ಹೌದೊಡ್ಡಿ ಅವರು ವಿನಂತಿಸಿದ್ದಾರೆ.
ಈ ಮನವಿ ಪತ್ರದ ಪ್ರತಿಗಳನ್ನು ರಾಯಚೂರು ಜಿಲ್ಲಾಧಿಕಾರಿಗಳಿಗೆ, ರಾಯಚೂರು ಶಾಸಕ ಹಾಗೂ ದೇವದುರ್ಗ ಶಾಸಕ ಅವರಿಗೂ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ AIMIM ಮುಖಂಡ ಶಇಬಾಜ್ ಖಾನ್, ವಾರ್ಡ್ ಸಂಖ್ಯೆ 18ರ ಸಂತೋಷ್, ಈರಣ್ಣ, ಮೊಹಮ್ಮದ್ ಸಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

