ಬಳ್ಳಾರಿ / ಕಂಪ್ಲಿ : ಅಧಿಕ ಮಾಸದಲ್ಲಿ ಭಗವಂತನ ಭಜನೆ ಮಾಡುವುದರಿಂದ ಸಕಾರಾತ್ಮಕ ಮನೋಭಾವನೆಯನ್ನು ವೃದ್ಧಿಗೊಳಿಸುತ್ತದೆ ಎಂದು ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ್ ವಾಗೀಶಾಚಾರ್ ಗೋರೆಬಾಳ ಹೇಳಿದರು.
ಕಂಪ್ಲಿ-ಕೋಟೆಯ ಶ್ರೀಪಟ್ಟಾಭಿರಾಮಚಂದ್ರದೇವರ ದೇವಸ್ಥಾನದಲ್ಲಿ ಅಧಿಕ ಮಾಸದ ಮಂಗಳೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭಜನಾ ಸಮಾರೋಪಕ್ಕೆ ಚಾಲನೆಯೊಂದಿಗೆ ಅಧಿಕ ಮಾಸ ಮಹಾತ್ಮೆ ಕುರಿತು ಉಪನ್ಯಾಸ ನೀಡಿ, ದಾನ ಧರ್ಮ ಪುಣ್ಯ ಪರೋಪಕಾರ್ಯಗಳನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಮನಸ್ಸನ್ನು ಭಗವಂತನದಲ್ಲಿ ಸ್ಥಿರವಾಗಿ ನಿಲ್ಲಿಸಲು ನಿತ್ಯ ಜಪ ತಪ, ಭಜನೆ, ಆರಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಕೋಟೆಯ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಕಳೆದ 30ದಿನಗಳಿಂದ ಬ್ರಾಹ್ಮಣ ಸುವಾಸಿನಿಯರು ಹಮ್ಮಿಕೊಂಡಿದ್ದ ಭಜನೆಯನ್ನು ಮಂಗಳಗೊಳಿಸಲಾಯಿತು. ಈ ನಿಮಿತ್ತ ಶ್ರೀರಾಮದೇವರು, ಲಕ್ಷ್ಮಿ ನರಸಿಂಹ, ಪ್ರಾಣದೇವರು, ರುದ್ರದೇವರು, ರಾಯರ ಮೃತ್ತಿಕಾ ವೃಂದಾವನಗಳಿಗೆ ಸುಪ್ರಭಾತ, ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇವೆ ಸಲ್ಲಿಸಲಾಯಿತು.
ಶ್ರೀರಾಮ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಸಾವಿತ್ರಿಬಾಯಿ ಜೋಷಿ, ರಮಾ ಪುರೋಹಿತ್, ವೇದಾ ಜೋಷಿ, ಚಂದ್ರಿಕಾ ಸಗರದ, ರಾಧಿಕ ಜೋಷಿ, ಜ್ಯೋತಿ ಗುಡಿ, ವಾಣಿ ಜೋಷಿ, ಲತಾ ರಾಮಾಯಣ, ರಚನಾ ಜೋಷಿ, ಸುಧಾ ವೈದ್ಯ, ಐಶ್ವರ್ಯ ಜೋಷಿ, ವರ್ಷಾವಿಕ್ರಮ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

