ರಾಯಚೂರು -: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಏಕಶಿಲಾ ಬಂಡೆ ಶಾಸನಕ್ಕೆ ರಕ್ಷಣೆ ಇಲ್ಲದ ಕಾರಣ ಬಂಡೆ ಕಲ್ಲಿನ ಪದರಗಳು ಕಳಚಿ ಬೀಳುತ್ತಿವೆ. ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ಲಕ್ಷ್ಯದ ಕಾರಣ ಏಕಶಿಲೆಯಲ್ಲಿನ ಶಾಸನ ಹಾಳಾಗಿ ಕಾಲಗರ್ಭ ಸೇರಲಾರಂಭಿಸಿದೆ.

ತಹಶೀಲ್ದಾರ್ ಕಚೇರಿ ರಸ್ತೆ ಪಕ್ಕ ಏಕಶಿಲಾ ಶಾಸನದ ಗೋಡೆ ಬದಿಯಲ್ಲಿ ಅನೇಕ ಅಂಗಡಿಗಳಿವೆ. ಬಂಡೆ ಶಾಸನದ ಐದು ಅಡಿ ಅಂತರದಲ್ಲೇ ಇಂದಿರಾ ಕ್ಯಾಂಟೀನ್ ಸಹ ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಯ ನಿಯಮ ಹಾಗೂ ಕಾನೂನುಗಳು ಗೊತ್ತಿದ್ದರೂ ಬೇರೆ ಇಲಾಖೆಗಳು ಸ್ಮಾರಕದ ಬಳಿಯೇ ಕಟ್ಟಡ ನಿರ್ಮಿಸಿಕೊಂಡಿವೆ. ಅಧಿಕಾರಿಗಳ ಮೌನ ಸಮ್ಮತಿ ಹಲವು ಅನಾಹುತಗಳಿಗೆ ದಾರಿ ಮಾಡಿಕೊಟ್ಟಿದೆ.

ಪುರಾತತ್ವ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಒಂದು ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಕೋಟೆ ಅಧ್ಯಯನ ಸಮಿತಿಯೇ ಬಂಡೆ ಶಾಸನದಲ್ಲಿ ಬರೆದಿರುವ ಅಂಶಗಳನ್ನು ಫಲಕದಲ್ಲಿ ಮುದ್ರಿಸಿ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಅಳವಡಿಸಿದೆ.

‘ಪುರಾತತ್ವ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆಯಲ್ಲಿ ನಿಪುಣ ಸಿಬ್ಬಂದಿಯ ಕೊರತೆ ಇದೆ. ಹೀಗಾಗಿ ನಗರದಲ್ಲಿನ ಸ್ಮಾರಕಗಳು ನಮ್ಮ ಕಣ್ಣೆದುರೇ ಹಾಳಾಗುತ್ತಿವೆ’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಗೌರವಾಧ್ಯಕ್ಷ ಜಯಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಅಪರೂಪದ ಬಂಡೆ ಶಾಸನ ಉಳಿಸಿಕೊಳ್ಳಲು ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು. ಶಾಸನಗಳ ಸಂರಕ್ಷಣೆಗೆ ಒತ್ತು ಕೊಡಬೇಕು’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಸೈಯದ್ ಹಫೀಜುಲ್ಲಾ ಮನವಿ ಮಾಡುತ್ತಾರೆ. ‘ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಯೋಜನೆ ಅಡಿ ಕಾವಲುಗಾರರನ್ನು ಕೊಟ್ಟರೂ ಅವರನ್ನು ಕೋಟೆ ರಕ್ಷಣೆಗೆ ನಿಯೋಜಿಸಲಾಗಿದೆ. ಸಿಬ್ಬಂದಿ ಕೊರತೆ ಇರುವ ಕಾರಣ ಏನೂ ಮಾಡದಂತ ಸ್ಥಿತಿಯಲ್ಲಿದ್ದೇವೆ’ ಎಂದು ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯುರೇಟ‌ರ್ ಶಿವಪ್ರಕಾಶ ಹೇಳಿದರು.

ಏಕಶಿಲಾ ಬಂಡೆ ಶಾಸನದ ವಿಶೇಷತೆಗಳು -: ರಾಯಚೂರು ನಗರದ ಬಸ್ ನಿಲ್ದಾಣ ಸಮೀಪ ಕೋಟೆಯ ಗೋಡೆಯಲ್ಲಿರುವ ದೊಡ್ಡ ಬಂಡೆಯ ಮೇಲಿನ ಶಾಸನ ಐತಿಹಾಸಿಕ ಕಾಕತೀಯರ ಕಾಲದ ಏಕಶಿಲಾ ಶಾಸನವು 42 ಉದ್ದ ಹಾಗೂ 3 ಅಡಿ ಅಗಲದ ಬೃಹತ್ ಕಲ್ಲಿನಲ್ಲಿದೆ. ಕ್ರಿ.ಶ. 1294ರ ನವೆಂಬ‌ರ್ 23ರಂದು ರಾಣಿ ರುದ್ರಮ್ಮದೇವಿಯವರ ಮಂತ್ರಿ ಗೋರೆ ಗಂಗಯ ರೆಡ್ಡಿವರ ಆಜ್ಞೆಯ ಮೇರೆಗೆ ಇದನ್ನು ಕೆತ್ತಲಾಗಿದೆ.

ಭಾಷೆ ಮತ್ತು ಲಿಪಿ: ಈ ಶಾಸನವು ಕನ್ನಡ ಲಿಪಿಯಲ್ಲಿದ್ದರೂ, ಬಳಸಲಾಗಿರುವ ಭಾಷೆ ತೆಲುಗಾಗಿದೆ. ಆಶಯ: “ಸರ್ವ ರಾಷ್ಟ್ರ ಸಮಸ್ತ ಪ್ರಜಾ ರಕ್ಷಣಾರ್ಥ” (ಎಲ್ಲಾ ರಾಷ್ಟ್ರಗಳ ಮತ್ತು ಜನರ ರಕ್ಷಣೆಗಾಗಿ) ಎಂಬ ಘೋಷಣೆಯೊಂದಿಗೆ ಕೋಟೆಯ ನಿರ್ಮಾಣವನ್ನು ಇದು ಸಾರುತ್ತದೆ. ಇದು ಕಾಕತೀಯರ ಕಾಲದ ಹೆಗ್ಗುರುತಾಗಿದ್ದು, ಅತ್ಯಂತ ದೀರ್ಘವಾದ ಏಕಶಿಲಾ ಶಾಸನವಾಗಿದೆ.

ಬಂಡೆ ಶಾಸನದ ಬದಿಯಲ್ಲಿ ಈ ಬೃಹತ್ ಕಲ್ಲನ್ನು ಎತ್ತಿನ ಗಾಡಿಗಳು ಮತ್ತು ಎತ್ತುಗಳನ್ನು ಬಳಸಿ ಗಣಿಯಿಂದ ಕೋಟೆಯವರೆಗೆ ಹೇಗೆ ತರಲಾಯಿತು ಎನ್ನುವುದನ್ನು ಬಿಂಬಿಸುವ ಕೆತ್ತನೆಗಳು ಸಹ ಕಾಣಸಿಗುತ್ತವೆ. ಕೋಟೆ ಪ್ರದೇಶದಲ್ಲಿ ಪರ್ಷಿಯನ್, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ಬರೆಯಲಾದ ಕಲ್ಲಿನ ಶಾಸನಗಳೂ ಇವೆ.

Leave a Reply

Your email address will not be published. Required fields are marked *

You missed

ಭಜನೆಗೆ ಸಕಾರಾತ್ಮಕ ಮನೋಭಾವ ವೃದ್ಧಿ : ವಾಗೀಶಾಚಾರ್ ಬಳ್ಳಾರಿ / ಕಂಪ್ಲಿ : ಅಧಿಕ ಮಾಸದಲ್ಲಿ ಭಗವಂತನ ಭಜನೆ ಮಾಡುವುದರಿಂದ ಸಕಾರಾತ್ಮಕ ಮನೋಭಾವನೆಯನ್ನು ವೃದ್ಧಿಗೊಳಿಸುತ್ತದೆ ಎಂದು ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ್ ವಾಗೀಶಾಚಾರ್ ಗೋರೆಬಾಳ ಹೇಳಿದರು. ಕಂಪ್ಲಿ-ಕೋಟೆಯ ಶ್ರೀಪಟ್ಟಾಭಿರಾಮಚಂದ್ರದೇವರ ದೇವಸ್ಥಾನದಲ್ಲಿ ಅಧಿಕ ಮಾಸದ ಮಂಗಳೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭಜನಾ ಸಮಾರೋಪಕ್ಕೆ ಚಾಲನೆಯೊಂದಿಗೆ ಅಧಿಕ ಮಾಸ ಮಹಾತ್ಮೆ ಕುರಿತು ಉಪನ್ಯಾಸ ನೀಡಿ, ದಾನ ಧರ್ಮ ಪುಣ್ಯ ಪರೋಪಕಾರ್ಯಗಳನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಮನಸ್ಸನ್ನು ಭಗವಂತನದಲ್ಲಿ ಸ್ಥಿರವಾಗಿ ನಿಲ್ಲಿಸಲು ನಿತ್ಯ ಜಪ ತಪ, ಭಜನೆ, ಆರಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಕೋಟೆಯ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಕಳೆದ 30ದಿನಗಳಿಂದ ಬ್ರಾಹ್ಮಣ ಸುವಾಸಿನಿಯರು ಹಮ್ಮಿಕೊಂಡಿದ್ದ ಭಜನೆಯನ್ನು ಮಂಗಳಗೊಳಿಸಲಾಯಿತು. ಈ ನಿಮಿತ್ತ ಶ್ರೀರಾಮದೇವರು, ಲಕ್ಷ್ಮಿ ನರಸಿಂಹ, ಪ್ರಾಣದೇವರು, ರುದ್ರದೇವರು, ರಾಯರ ಮೃತ್ತಿಕಾ ವೃಂದಾವನಗಳಿಗೆ ಸುಪ್ರಭಾತ, ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇವೆ ಸಲ್ಲಿಸಲಾಯಿತು. ಶ್ರೀರಾಮ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಸಾವಿತ್ರಿಬಾಯಿ ಜೋಷಿ, ರಮಾ ಪುರೋಹಿತ್, ವೇದಾ ಜೋಷಿ, ಚಂದ್ರಿಕಾ ಸಗರದ, ರಾಧಿಕ ಜೋಷಿ, ಜ್ಯೋತಿ ಗುಡಿ, ವಾಣಿ ಜೋಷಿ, ಲತಾ ರಾಮಾಯಣ, ರಚನಾ ಜೋಷಿ, ಸುಧಾ ವೈದ್ಯ, ಐಶ್ವರ್ಯ ಜೋಷಿ, ವರ್ಷಾವಿಕ್ರಮ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.