ಬಳ್ಳಾರಿ / ಕಂಪ್ಲಿ : ಮೆಟ್ರಿ ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಹಳ್ಳಿ ಸಿದ್ದಪ್ಪನವರ ಪಿಎಂಶ್ರೀ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯ ನೀಡುವುದರ ಮೂಲಕ ಸಂಘ ಸಂಸ್ಥೆಗಳಿಗೆ ನೆರವಾಗುತ್ತದೆ. ಕಲೆ ಸಾಹಿತ್ಯ ಸಂಸ್ಕೃತಿ ಕಡೆ ಮಕ್ಕಳು ಕಲೆಗಳನ್ನು ಬೆಳಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಸುಮಾರು ಹತ್ತು ಹದಿನೈದು ವರ್ಷಗಳಿಂದ ನಮ್ಮ ಊರಿನ ಗೌರವಯತ ಕೆ.ಶಂಕರ ಸತತವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರೇಖಾ ಮಾತನಾಡಿ, ಹಳ್ಳಿಗಳಲ್ಲಿ ಮೊದಲು ಹಲವಾರು ಕಲೆಗಳನ್ನು ನೋಡುತ್ತಿದ್ದೆವು. ಆದರೆ, ಇಂದಿನ ದಿನಗಳಲ್ಲಿ ಕಲೆಗಳು ಕಣ್ಣಿಗೆ ಕಾಣದಂತೆ ಮರೆಯಾಗಿ ಹೋಗುತ್ತಿವೆ. ಇಂದಿನ ಮಕ್ಕಳಿಗೆ ನಾಟಕ, ಸಂಗೀತ, ಮತ್ತು ನೃತ್ಯಗಳಿಗೆ ತಿಳಿಸಿಕೊಡಲು ಮನೆಯಲ್ಲಿ ಕಲೆಯನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಸ್ನೇಹ ಜೀವಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ನಾಗರಾಜ ಮಾತನಾಡಿದರು.
ಕೆ.ಹನುಮಂತ ರೆಡ್ಡಿ ಮತ್ತು ತಂಡದವರು ಕಂಸಾಳೆ ನೃತ್ಯ, ಚಂದ್ರಶೇಖರ ಬಸಾಪುರ, ಪುರುಷೋತ್ತಮ ಡಿ,ಕುರುಬರ ಹೇಮೇಶ್ವರ ಮತ್ತು ತಂಡದವರು ರಂಗಗೀತೆಗಳು ಮತ್ತು ಕುಂಟ ಕುಂಟ ಕುರುವತ್ತಿ ಅನಂತಕುಮಾರ ದೊರೆ ಮತ್ತು ತಂಡದವರು ಸಾಮಾಜಿಕ ನಾಟಕ ನೇರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕಬ್ಬೇರ ಹುಲುಗಪ್ಪ, ಶಾಲಾ ಶಿಕ್ಷಕ ಮಡಿವಾಳಪ್ಪ, ಎಮ್.ಡಿ.ವಿನಾಯಕ, ಕೆ.ಹನುಮಂತ ರೆಡ್ಡಿ, ನೆಣಿಕೆ ಗಿರೀಶ, ಸಿ.ಡಿ.ಚಿನ್ನರಾಜ, ಸ್ನೇಹ ಜೀವಿ ಸಾಮಾಜಿಕ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಕೆ.ಶಂಕರ ಮೆಟ್ರಿ ಸೇರಿದಂತೆ ಅನೇಕರಿದ್ದರು.

