ಅಧಿಕ ಜೇಷ್ಠಮಾಸದ ಅಂಗವಾಗಿ ಬಳಗಾನೂರಿನ ಶ್ರೀ ಬಂಧುಶತಪುರೇಶ ದೇವರಿಗೆ ಲಕ್ಷ ತುಳಸಿ ಅರ್ಚನೆ, ಪವಮಾನ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಜೂನ್ 4ರಿಂದ 14ರವರೆಗೆ ಆಯೋಜಿಸಲಾಗಿದ್ದು, ಶನಿವಾರ ಸಂಜೆ ಪೇಜಾವರ ಮಠ, ಉಡುಪಿಯ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಭವ್ಯ ಪುರಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ವಿಪ್ರಸಮಾಜದ ಹಿರಿಯರು, ಮುಖಂಡರು ಹಾಗೂ ಪಟ್ಟಣದ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಬಾಣ-ಬಿರುಸುಗಳನ್ನು ಸಿಡಿಸುವ ಮೂಲಕ ಭಕ್ತಿಪೂರ್ವಕ ಸ್ವಾಗತ ಕೋರಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರು ಜಯಘೋಷ ಮೊಳಗಿಸುತ್ತಾ ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡರು.
ಪುರಪ್ರವೇಶ ಕಾರ್ಯಕ್ರಮವು ಧಾರ್ಮಿಕ ಸಂಭ್ರಮ, ಭಕ್ತಿ ಮತ್ತು ವೈಭವದ ವಾತಾವರಣದಲ್ಲಿ ಜರುಗಿತು. ಶ್ರೀಗಳ ದರ್ಶನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.ರವಿವಾರ ಶ್ರೀಗಳಿಗೆ ಪಾದಪೂಜೆ ಮಾಡಲಾಗುವುದು. ಮಾರುತಿ ದೇವರಿಗೆ ಅಭಿಷೇಕ ಹಾಗೂ ಪವಮಾನ ಹೋಮ ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀಗಳು ನೇತೃತ್ವ ವಹಿಸಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

