ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ್ ನಾಯಕ ಅವರು ಭೇಟಿ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗಾವಕಾಶ ವೃದ್ಧಿ ಹಾಗೂ ರೈಲು ಸಂಪರ್ಕ ಸುಧಾರಣೆ ಕುರಿತು ಮಹತ್ವದ ಬೇಡಿಕೆಗಳನ್ನು ಮಂಡಿಸಿದರು.
ಭೇಟಿ ವೇಳೆ ಸಂಸದರು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯಡಿ ರಾಯಚೂರು ನಗರದ ಹೊರವಲಯದಲ್ಲಿ ಆಧುನಿಕ ಮಲ್ಟಿ-ಮೊಡಲ್ ಕಾರ್ಗೋ ಟರ್ಮಿನಲ್ ಸ್ಥಾಪಿಸುವಂತೆ ಮನವಿ ಮಾಡಿದರು. ರಾಯಚೂರು ಜಿಲ್ಲೆ ಭೌಗೋಳಿಕವಾಗಿ ಪ್ರಮುಖ ಸ್ಥಾನದಲ್ಲಿದ್ದು, ಇಲ್ಲಿ ಕಾರ್ಗೋ ಟರ್ಮಿನಲ್ ಸ್ಥಾಪನೆಯಾದಲ್ಲಿ ಕೃಷಿ ಉತ್ಪನ್ನಗಳು, ಖನಿಜ ಸಂಪತ್ತು ಹಾಗೂ ಕೈಗಾರಿಕಾ ವಸ್ತುಗಳ ಸಾಗಣೆ ಸುಗಮವಾಗಲಿದೆ. ಇದರಿಂದ ಉದ್ಯಮ ಹೂಡಿಕೆ ಹೆಚ್ಚಾಗಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ವಿವರಿಸಿದರು.
ಸಂಸದರು ವಿಶೇಷವಾಗಿ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಅಗತ್ಯವನ್ನು ಒತ್ತಿ ಹೇಳಿದರು. ಭಾಷಾ ಅಡಚಣೆ ಕಾರಣದಿಂದ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆಯಾಗುತ್ತಿರುವುದನ್ನು ಸಚಿವರ ಗಮನಕ್ಕೆ ತಂದ ಅವರು, ಕನ್ನಡದಲ್ಲಿ ಪರೀಕ್ಷೆ ನಡೆಸುವುದರಿಂದ ಕರ್ನಾಟಕದ ಸಾವಿರಾರು ಯುವಕರಿಗೆ ಸಮಾನ ಅವಕಾಶ ದೊರೆಯಲಿದೆ ಎಂದು ಮನವರಿಕೆ ಮಾಡಿದರು.
ಪ್ರಯಾಣಿಕರ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿಶಾಖಪಟ್ಟಣಂ–ಮಹೆಬೂಬ್‌ನಗರ ರೈಲನ್ನು ರಾಯಚೂರಿನವರೆಗೆ ವಿಸ್ತರಿಸುವಂತೆ ಹಾಗೂ ರೈಲು ಸಂಖ್ಯೆ 20953/20954 ಮತ್ತು 22689/22690 ರೈಲುಗಳನ್ನು ಅಬು ರೋಡ್ ತನಕ ವಿಸ್ತರಿಸುವಂತೆ ಮನವಿ ಸಲ್ಲಿಸಿದರು. ಈ ವಿಸ್ತರಣೆ ಜಾರಿಯಾದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ರಾಜಸ್ಥಾನ ರಾಜ್ಯಗಳ ನಡುವೆ ಸಂಪರ್ಕ ವಿಸ್ತರಿಸಿ ವ್ಯಾಪಾರ, ಶಿಕ್ಷಣ, ಧಾರ್ಮಿಕ ಹಾಗೂ ವೈದ್ಯಕೀಯ ಪ್ರಯಾಣಗಳಿಗೆ ಮಹತ್ವದ ನೆರವು ದೊರೆಯಲಿದೆ ಎಂದು ಹೇಳಿದರು.
ಸಚಿವರೊಂದಿಗೆ ನಡೆದ ಸುಧೀರ್ಘ ಚರ್ಚೆಯಲ್ಲಿ ಪ್ರಾದೇಶಿಕ ಸಮತೋಲನ ಅಭಿವೃದ್ಧಿ, ಉತ್ತರ ಕರ್ನಾಟಕ ಭಾಗದ ಮೂಲಸೌಕರ್ಯ ಬಲವರ್ಧನೆ ಹಾಗೂ ಸಾರ್ವಜನಿಕರ ಪ್ರಯಾಣ ಅನುಕೂಲತೆ ಕುರಿತು ಸಂಸದರು ವಿಶೇಷವಾಗಿ ಒತ್ತಾಯಿಸಿದರು. ಮಂಡಿಸಲಾದ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಯುವಕರ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಸಂಸದ ಜಿ. ಕುಮಾರ ನಾಯಕ ಅವರು ಈ ಸಂದರ್ಭದಲ್ಲಿ ಹೇಳಿದರು.

Leave a Reply

Your email address will not be published. Required fields are marked *