ತಾಳಿಕೋಟಿ: ಪಟ್ಟಣದ ಶ್ರೀ ರಾಮ ನವಮಿ ಉತ್ಸವ ಸಮಿತಿ(ರಿ) ವತಿಯಿಂದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಜನ್ಮದಿನದ ಪ್ರಯುಕ್ತವಾಗಿ ಆಯೋಜಿಸಿದ ಎರಡನೇ ವರ್ಷದ ಶ್ರೀ ರಾಮನವಮಿ ಉತ್ಸವ ಹಾಗೂ ಭವ್ಯ ಶೋಭಾಯಾತ್ರೆ ಇಂದು (ಮಾ.30) ಅದ್ದೂರಿಯಾಗಿ ನಡೆಯಲಿದೆ. ಉತ್ಸವದ ಅಂಗವಾಗಿ ಇಂದು ಸಂಜೆ 4-00 ಘಂಟೆಗೆ ಶ್ರೀ ಮಹಾರಾಣಾ ಪ್ರತಾಪ ಸಿಂಹಜೀ ವೃತ್ತದಲ್ಲಿ ನಡೆಯಲಿರುವ ಬಹಿರಂಗ ಸಭೆಯ ಪಾವನ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ದೇವರು, ಗುಂಡಕನಾಳ ಬ್ರಹನ್ಮಠದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೆಸರಟ್ಟಿ ಶಂಕರಲಿಂಗ ಮಠದ ಪೂಜ್ಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಹಾಗೂ ವೇದ ಮೂರ್ತಿ ವೆಂಕಟೇಶಾಚಾರ್ಯ ಗ್ರಾಮಪುರೋಹಿತ ಅವರು ವಹಿಸುವರು. ವಿಜಯಪುರ ನಗರ ಶಾಸಕ ಬಸನಗೌಡ ಆರ್.ಪಾಟೀಲ (ಯತ್ನಾಳ) ಸಮಾರಂಭವನ್ನು ಉದ್ಘಾಟಿಸುವರು. ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಎನ್.ಮನಗೂಳಿ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಮುಖ್ಯ ಅತಿಥಿಗಳಾಗಿ ಆಗಮಿಸುವರು. ವೇದಿಕೆ ಕಾರ್ಯಕ್ರಮದ ನಂತರ ಭವ್ಯ ಶೋಭಾ ಯಾತ್ರೆ ಪಟ್ಟಣದ ಶ್ರೀ ಮಹಾರಾಣಾ ಪ್ರತಾಪ್ ಸಿಂಹಜೀ ವೃತದಿಂದ ಆರಂಭವಾಗಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವೃತ್ತ, ಕತ್ರಿ ಬಜಾರ್, ಶ್ರೀ ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಶ್ರೀ ಬಸವೇಶ್ವರ ವೃತ್ತದಲ್ಲಿ ಸಂಪನ್ನ ವಾಗುವುದು. ಹಿಂದೂ ಸಮಾಜದ ಧರ್ಮ ಜಾಗೃತಿ ಗಾಗಿ ನಡೆಯುವ ಸದರಿ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

