“ಪ್ರಕೃತಿಯ ಚರಾಚರ ವಸ್ತುಗಳಲ್ಲಿ ಸಂಗೀತ ಅಡಗಿದೆ ಹಾಗೂ ಅದರಲ್ಲಿ ಅದ್ಭುತವಾದ ಚಿಕಿತ್ಸಕ ಗುಣವಿದೆ. ನಮ್ಮ ಭಾಗದಲ್ಲಿ ಪ್ರತಿಭಾವಂತ ಸಂಗೀತ ಕಲಾವಿದರಿಗೆ ಕೊರತೆಯಿಲ್ಲ, ಆದರೆ ಅವರಿಗೆ ಸಿಗಬೇಕಾದ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ,” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋವಿಂದ ವಿಷಾದ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ಪಂಚಾಕ್ಷರಿ ಗವಾಯಿಗಳ ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ ಮತ್ತು ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮುಂಬರುವ ದಿನಗಳಲ್ಲಿ ಸರ್ಕಾರಿ ಮತ್ತು ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು,ಪ್ರಾಥಮಿಕ ಶಿಕ್ಷಣದಿಂದಲೇ ಸಂಗೀತವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಕಲಿಸಲು ಸರ್ಕಾರ ಅವಕಾಶ ನೀಡಬೇಕು,ಸಂಗೀತ ಪದವೀಧರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಉಪ ತಹಶೀಲ್ದಾರ್ ಅಮರನಾಥ ಉದ್ಘಾಟಿಸಿದರು. ನಗರಸಭಾ ಸದಸ್ಯ ತಾರಿಹಳ್ಳಿ ಜಂಬುನಾಥ ಮಾತನಾಡಿದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಅವರ ಸಾನಿಧ್ಯದಲ್ಲಿ ಅವರಿಗೆ ತುಲಾಭಾರ ಸೇವೆ ನೆರವೇರಿಸಲಾಯಿತು.
ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪಂಡಿತ್ ಸದಾಶಿವ ಐಹೊಳೆ, ಪಂಡಿತ್ ಸದಾಶಿವ ಪಾಟೀಲ್, ನಾಗರಾಜ ಪತ್ತಾರ್, ಕೃಷ್ಣಪ್ಪ ಜೋಗಿ ಸೇರಿದಂತೆ ಹಲವರಿಗೆ ‘ಶ್ರೀ ಗುರು ಪುಟ್ಟರಾಜ ಕಲಾ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಮಾರಿ ಆರೋಹಿ ಐಹೊಳೆ ಅವರಿಂದ ಕಥಕ್ಕಳಿ ನೃತ್ಯ ಪ್ರದರ್ಶನ ನಡೆಯಿತು. ನಂತರ ಆಕಾಶವಾಣಿ ಕಲಾವಿದರಾದ ಪಂಡಿತ್ ಸದಾಶಿವ ಐಹೊಳೆ, ಸುಮ ಕಾಳಗಟ್ಟ ಹಾಗೂ ತಂಡದವರಿಂದ ಜರುಗಿದ ಹಿಂದೂಸ್ತಾನಿ ಗಾಯನವು ಪ್ರೇಕ್ಷಕರ ಮನಸೂರೆಗೊಂಡಿತು.
ವೇದಿಕೆಯ ಮೇಲೆ ಕೆ.ಪಿ. ಉಮಾಪತಿ, ಬಿ. ಪಾಲಾಕ್ಷ, ಕಡ್ಲಿ ವೀರಭದ್ರೇಶ, ವಕೀಲ ಕರುಣಾನಿಧಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

