ತಾಳಿಕೋಟಿ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಗಲಕೋಟ ಹಾಗೂ ಬಿ.ಎಸ್.ಪಾಟೀಲ ಫೌಂಡೇಶನ್ (ಸಾಸನೂರ) ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಮಹಾ ಶಿಬಿರ ಇಂದು(ಮಾ.22) ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಸದರಿ ಶಿಬಿರದಲ್ಲಿ ಜನರಲ್ ಮೆಡಿಸನ್, ಸಕ್ಕರೆ ಕಾಯಿಲೆ, ಬಿಪಿ ಥೈರಾಯ್ಡ್, ಹೃದಯ ದೌರ್ಬಲ್ಯ ಚಿಕಿತ್ಸೆ, ಹೃದಯನಾಳು ಬ್ಲಾಕ್ ಸಲಹೆ, ಸ್ತ್ರೀ ರೋಗ ಹಾಗೂ ಪ್ರಸೂತಿ ಹೆರಿಗೆ ಬಂಜೆತನ, ಗರ್ಭಾಶಯ ತೆರವು ಶಸ್ತ್ರಚಿಕಿತ್ಸೆ, ಎಲಬು ಮತ್ತು ಕೀಲು, ಚಿಕ್ಕ ಮಕ್ಕಳ ಚಿಕಿತ್ಸೆ, ಮೂಗು ಕಿವಿ ಮತ್ತು ಗಂಟಲು ಚಿಕಿತ್ಸೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳ ಹಾಗೂ ಇನ್ನಿತರ ರೋಗಗಳ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಲಾಗುವುದು ಹಾಗೂ ಹೆಚ್ಚಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಈ ಶಿಬಿರದ ಉದ್ಘಾಟನಾ ಸಮಾರಂಭವು ಮುಂಜಾನೆ 9:00 ಘಂಟೆಗೆ ಕೊಣ್ಣೂರ ಗ್ರಾಮದ ಬಲವಂತ್ರಾಯ ಹಡಲಗೇರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಪ.ಪೂ.ಸಿದ್ದಲಿಂಗ ದೇವರು ಸಾನಿಧ್ಯ ವಹಿಸುವರು.ಕೆ.ಎಸ್.ಡಿ.ಎಲ್.ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಉದ್ಘಾಟಿಸುವರು. ದೇವರ ಹಿಪ್ಪರಗಿ ಮತಕ್ಷೇತ್ರ ಮಾಜಿ ಶಾಸಕ ಸೋಮನಗೌಡ ಬಿ.ಪಾಟೀಲ ಸಾಸನೂರ ಅಧ್ಯಕ್ಷತೆ ವಹಿಸುವರು.ಜಿ.ಪಂ.ಮಾಜಿ ಅಧ್ಯಕ್ಷ ಪ್ರಭುಗೌಡ ಚ.ದೇಸಾಯಿ ಮುಖ್ಯ ಅತಿಥಿಗಳಾಗಿ ಹಾಗೂ ಅಸ್ಕಿ ಫೌಂಡೇಶನ್ ಕೊಣ್ಣೂರ ಅಧ್ಯಕ್ಷ ಸಿ.ಬಿ.ಅಸ್ಕಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದು ಕೃಷಿ ನೊಡಲ್ ಅಧಿಕಾರಿ ಮಹೇಶ ಜೋಶಿ ವಿಶೇಷ ಆಹ್ವಾನಿತರಾಗಿರುವರು.ಡಾ. ಪ್ರೀತಿ ವಿಜಯ್ ಅಸ್ಕಿ ಎಂ.ಡಿ.(ಯುಎಸ್ ಎ)ಹಾಗೂ ಡಾ.ವಿಜಯ್ ಅಸ್ಕಿ ಹಾಗೂ ಪಾಟೀಲ ಕುಟುಂಬದ ಪ್ರಮುಖರು ಉಪಸ್ಥಿತರಿರುವರು. ಗ್ರಾಮೀಣ ಭಾಗದ ಬಡವರು ಹಾಗೂ ರೈತರಿಗೆ ಅನುಕೂಲವಾಗಲೆಂದು ಹಮ್ಮಿಕೊಂಡಿರುವ ಈ ಶಿಬಿರದ ಸದುಪಯೋಗವನ್ನು ಕೊಣ್ಣೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಮಾಡಿಕೊಳ್ಳಬೇಕೆಂದು ಶಿಬಿರದ ನೇತೃತ್ವ ವಹಿಸಿದ ಡಾ.ಬಸವರಾಜ ಅಸ್ಕಿ (ಕೊಣ್ಣೂರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

