ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮವು ಧಾರ್ಮಿಕ ಸೌಹಾರ್ದತೆಯ ಸುಂದರ ಪ್ರತೀಕವಾಗಿ ಮತ್ತೊಮ್ಮೆ ಕಂಗೊಳಿಸಿತು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ರಾಜಾಭಕ್ಷಾ ಉರ್ಫ್ ಯಮನೂರಪ್ಪ ದರ್ಗಾದ ವಾರ್ಷಿಕ ಗಂದಾ, ಉರಸು ಹಾಗೂ ಜಿಯಾರತ್ ಕಾರ್ಯಕ್ರಮವು ಶನಿವಾರ ಭಕ್ತಿ, ನಂಬಿಕೆ ಮತ್ತು ಸಹೋದರತ್ವದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಹೋಳಿ ಹುಣ್ಣಿಮೆಯ ನಂತರ ಪ್ರಾರಂಭವಾಗುವ ಗಂದಾ–ಉರಸು ಉತ್ಸವವು ಗ್ರಾಮದಲ್ಲಿ ವಿಶೇಷ ಭಕ್ತಿಭಾವ ಮೂಡಿಸಿತು. ವಿವಿಧ ಧರ್ಮಗಳ ಭಕ್ತರು ಒಂದೇ ವೇದಿಕೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಗೌರವ ಹಾಗೂ ಸಹಬಾಳ್ವೆಯ ಸಂದೇಶ ಸಾರಿದರು.
ಉರಸು ಅಂಗವಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ಫಾತೇಹಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ದರ್ಗಾಕ್ಕೆ ಭೇಟಿ ನೀಡಿ ಕಾಣಿಕೆ ಅರ್ಪಿಸಿ ತಮ್ಮ ಮನೋಭಿಲಾಷೆಗಳನ್ನು ಬೇಡಿಕೊಂಡರು. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ಇಚ್ಛೆಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಈ ಉತ್ಸವದ ವಿಶೇಷತೆ ಎಂದರೆ ಮುಸ್ಲಿಂ ಸಮುದಾಯದವರಷ್ಟೇ ಅಲ್ಲದೆ ಹಿಂದೂ ಸೇರಿದಂತೆ ವಿವಿಧ ಧರ್ಮಗಳ ಜನರು ಸಮಾನವಾಗಿ ಪಾಲ್ಗೊಳ್ಳುವುದಾಗಿದೆ. ಗ್ರಾಮಸ್ಥರು ಧರ್ಮಭೇದವಿಲ್ಲದೆ ಒಟ್ಟಾಗಿ ಉತ್ಸವ ಆಚರಿಸುವುದು ಗ್ರಾಮೀಣ ಸೌಹಾರ್ದತೆಯ ಸುಂದರ ಉದಾಹರಣೆಯಾಗಿದೆ.
ಉರಸು ಸಂದರ್ಭದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಗ್ರಾಮ ಯುವಕರು ಹಾಗೂ ಹಿರಿಯರು ಸೇರಿ ಉತ್ಸವದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದರು. ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಸ್ವಯಂಸೇವಕರು ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚನ್ನಬಸಪ್ಪಗೌಡ ಪಾಟೀಲ್, ಈರನಗೌಡ ಪಾಟೀಲ್, ಬೀಮನಗೌಡ ಪಾಟೀಲ್, ಮಹಿಬೂಬ್ ಮುಲ್ಲಾ, ದಾವಲಸಾಬ ವಾಲಿಕಾರ, ಮಹಿಬೂಬ ಡವಳಗಿ, ಸಿದ್ದು ಕಾಜಗಾರ, ಎಲ್‌.ಎಂ. ಅವಟಿ, ಮಹಿಬೂಬ ವಾಲಿಕಾರ, ಸುಭಾನಲ್ಲಿ ಮುಲ್ಲಾ, ಹಜರೇಸಾ ಹೆಬ್ಬಾಳ, ಬಸವರಾಜ ಹೀರೆಕುರಬರ, ಸಲೀಮ್ ಡವಳಗಿ, ಮುರೆಗೇಪ್ಪ ಹೀರೆಕುರಬರ, ಸಂಗಪ್ಪ ಹಣಮಸಾಗರ, ರಾಜೇಸಾ ಅವಟಿ, ದಸ್ತಗೀರ ಅವಟಿ, ಪರಯ್ಯ ಹೀರೆಮಠ, ಕಾಸೀಮಸಾ ಡವಳಗಿ, ರಫೀಕ್ ಡವಳಗಿ, ಮಕಬುಲ್ ಬನ್ನೇಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *