ಐತಿಹಾಸಿಕ ಕನಕಾಚಲಪತಿ ಮಹಾ ರಥೋತ್ಸವಕ್ಕೆ ಬುಧವಾರ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಹರಿದುಬಂದರು.ಪಟ್ಟಣದ ತಹಶೀಲ್ದಾರ್ ಕಚೇರಿ, ಹಳೆಯ ಪೊಲೀಸ್ ಠಾಣೆ, ರಾಘವೇಂದ್ರ ಮಠ, ಪೊಲೀಸ್ ವಸತಿ ಗೃಹ, ಎಪಿಎಂಸಿ ಆವರಣ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಿದಾನಂದ ಅವಧೂತರ ಮಠ ಸೇರಿದಂತೆ ಹಲವೆಡೆ ಜನರು ಬಿಡಾರ ಹೂಡಿರುವ ದೃಶ್ಯಗಳು ಕಂಡುಬಂದಿತು.
ಎರಡನೇಯ ತಿರುಪತಿ ಎಂದು ಕರೆಯಲಾಗುವ ಕನಕಾಚಲಪತಿ ದೇವಸ್ಥಾನದ ಬಳಿಯ ಪುಷ್ಕರಣಿ ಹತ್ತಿರ ಸಾವಿರರು ಭಕ್ತರು ತಲೆಮಂಡೆ ನೀಡಿ ಹರಿಕೆ ತೀರಿಸಿಕೊಂಡರು.
ಭಕ್ತರ ಅನುಕೂಲಕ್ಕಾಗಿ ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ವೆಂಕಟಪತಿ ಬಾವಿ, ಪುಷ್ಕರಣಿ ಹತ್ತಿರ ನೂರಾರು ನೀರಿನ ನಲ್ಲಿಗಳು ಹಾಗೂ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿದ್ದರು.
ಇಲ್ಲಿನ ಚಿದಾನಂದ ಅವದೂತರ ಮಠದಲ್ಲಿ ಕನಕಾಚಲಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ದಾಸೋಹದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. 25ಕ್ಕೂ ಹೆಚ್ಚು ಕ್ಚಿಂಟಲ್ ಅಕ್ಕಿ ಬಳಸಲಾಗಿದೆ ಎಂದು ದಾಸೋಹ ಸಮಿತಿಯ ಪ್ರಮುಖ ಸುದರ್ಶನರೆಡ್ಡಿ ತಿಳಿಸಿದರು.
ಕೊಪ್ಪಳ, ಕುಷ್ಟಗಿ, ಬೀದರ್, ಕಲಬುರಗಿ, ಬಳ್ಳಾರಿ, ಹಾವೇರಿ, ಸುರಪುರ, ನವಲಗುಂದ, ಸಿಂಧನೂರು, ಕುಡುತಿನಿ, ಹಾವೇರಿ, ವಿಜಯಪುರ, ಕಲಬುರಗಿ, ಒಳಗೊಂಡಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ ದೇಗುಲಕ್ಕೆ ಬಂದು ದರ್ಶನ ಪಡೆದು ಕಾಣಿಕೆ ಸಲ್ಲಿಸಿದರು.
ಕುಷ್ಟಗಿ, ಲಿಂಗಸೂರು ಕಡೆಯಿಂದ ಬರುವ ಭಕ್ತರಿಗೆ ಹುಲಿಹೈದರ್ ಗ್ರಾಮಸ್ಥರು ಅನ್ನ ಸಂತರ್ಪಣೆ ಆಯೋಜಿಸಿದ್ದರು. ಪಟ್ಟಣದ ವಿವಿಧೆಡೆ ಸಮಾಜ ಹಾಗೂ ಸಂಘಟನೆಗಳ ಪದಾಧಿಕಾರಿಗಳು, ಗೆಳೆಯರ ಬಳಗದವರು ಉಪಾಹಾರ, ಊಟದ ವ್ಯವಸ್ಥೆ ಮಾಡಿಸಿದ್ದರು. ರಥೋತ್ಸವಕ್ಕೆ ಬಂದ ಸಾರ್ವಜನಿಕರಿಗೆ
ಬೆಳಿಗ್ಗೆಯಿಂದಲೆ ಮಜ್ಜಿಗೆ, ಶರಬತ್, ಶುದ್ದ ಕುಡಿಯುವ ನೀರು ವಿತರಿಸಲಾಯಿತು. ಗಂಜ್ ಹಮಾಲರ ಸಂಘದ ನಿವೃತ್ತ ಕಾರ್ಮಿಕ ತಾಜುದ್ದೀನ್ ಗೊರಳ್ಳಿ ಹಾಗೂ ಅವರ ಮಕ್ಕಳು 2,400 ಲೀಟರ್ ಮಜ್ಜಿಗೆ, ಶರಬತ್ ಸೇವೆ ಸಲ್ಲಿಸಿದರು.
ಭರ್ಜರಿ ವ್ಯಾಪಾರ: ಕನಕಾಚಲಪತಿ ದೇವರಿಗೆ ಪ್ರಿಯಾವಾದ ಧವನ್, ಕಾಯಿ, ಕರ್ಪೂರ, ತೆಂಗಿನಕಾಯಿ, ಹೂವು, ಕುಂಕುಮ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಧವನ್ ಹೂವು ಮಾರಾಟ ಮಾಡಲು ಚಿತ್ರದುರ್ಗ ಹಾಗೂ ಕೂಡ್ಲಿಗಿ, ವಿಜಯನಗರ ಜಿಲ್ಲೆಯ ವ್ಯಾಪಾರಸ್ಥರು, ಹೂವಿನಹಾರ ಮಾರಾಟ ಮಾಡಲು ಗದಗ ಜಿಲ್ಲೆಯ ಗಜೇಂದ್ರಗಡದ ಇಪ್ಪತ್ತಕ್ಕೂ ಹೆಚ್ಚು ಹೂ ಮಾರಾಟಗಾರರು ಬಂದಿದ್ದರು.
ತಹಶೀಲ್ದಾರ್ ವಿಶ್ವನಾಥ ಮುರುಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೆಗಡೆ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಕೆ. ರಾಜಶೇಖರ ಅವರು ಭಕ್ತರಿಗೆ ಕುಡಿಯುವ ನೀರು, ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಿದ್ದರು. ಜನಜಂಗುಳಿ ಪ್ರದೇಶ ಹಾಗೂ ತೇರಿನ ಸುತ್ತಲೂ ಪೊಲೀಸರ ಪಹರೆ ಹಾಕಲಾಗಿತ್ತು. ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ, ಪಿಐ ವಿ.ನಾರಾಯಣ ಅವರು ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿದ್ದರು.
ಕನಕಗಿರಿಯ ಕನಕಾಚಲಪತಿ ರಥೋತ್ಸವ ನಡೆಯುವಾಗ ರಥದ ಹಿಂದೆ ಇದ್ದ ಜನಸ್ತೋಮ- ಲೋಹಿತ್ ಭಕ್ತ, ಚಳಗೇರಿನಾವು ಪ್ರತಿವರ್ಷ ಕನಕರಾಯನ ಜಾತ್ರೆಗೆ ಪಾದಯಾತ್ರೆ ಮಾಡಿಕೊಂಡು ಬಂದು ಒಂದುದಿನ ವಾಸ್ತವ್ಯ ಹೂಡಿ ಕುಟುಂಬದವರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಮತ್ತೆ ಊರಿಗೆ ಹೋಗುತ್ತೇವೆ.- ಮಲ್ಲಪ್ಪ ಗೊಬ್ಬರಕಲ್, ವೀರಾಪುರಕನಕರಾಯ ನಮ್ಮ ಮನೆ ದೇವರು. ಬಾಲ್ಯದಿಂದಲೂ ಜಾತ್ರೆಗೆ ಬರುತ್ತೇವೆ ಪ್ರತಿವರ್ಷಕ್ಕಿಂತ ಈ ವರ್ಷ ತಾಲ್ಲೂಕು ಆಡಳಿತ ಉತ್ತಮ ವ್ಯವಸ್ಥೆ ಕಲ್ಪಿಸಿದೆ.

