ಸಿಂಧನೂರು: ಇರಾನ್- ಇಸ್ರೇಲ್ ನಡುವೆ ಯುದ್ದ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮತ್ತು ಅವರ ಪತ್ನಿ ಜ್ಯೋತಿ ಸೇರಿ ಕರ್ನಾಟಕ ರಾಜ್ಯದ 70 ಜನ ದುಬೈನಲ್ಲಿ ಸಿಲುಕಿಕೊಂಡು ಆತಂಕಕ್ಕೆ ಸಿಲುಕಿದ್ದಾರೆ.ವಿಜಯರತ್ನ ಇಂಟರ್ ನ್ಯಾಷನಲ್ ಅವಾರ್ಡ್ ಗೆ ಭಾಜನರಾದ ಕಾರಣಕ್ಕೆ ಅದನ್ನು ಸ್ವೀಕರಿಸುವುದಕ್ಕಾಗಿ ಡಾ. ಕೆ. ಶಿವರಾಜ ಪಾಟೀಲ್ ಅವರು ತಮ್ಮ ಪತ್ನಿಯೊಂದಿಗೆ ದುಬೈ ಪ್ರವಾಸಕ್ಕೆಂದು ಫೆ.24 ರಂದು ಬಳ್ಳಾರಿಯಿಂದ ತೆರಳಿದ್ದರು. ಫೆ.28ಕ್ಕೆ ವಾಪಸ್ ಆಗಬೇಕಿತ್ತು.
ಆದರೆ ಇದರ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಯಾದ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ಭಾರತಕ್ಕೆ ಬರಲು ಆಗದೆ ದುಬೈನಲ್ಲಿಯೇ ಸಿಲುಕಿಕೊಂಡಿದ್ದಾರೆ. ಡಾ.ಕೆ. ಶಿವರಾಜ ಪಾಟೀಲ್ ಸೇರಿ ರಾಜ್ಯದ 70 ಜನರು ಸದ್ಯ ದುಬೈನ ಖಾಸಗಿ ಹೋಟೆಲ್ ಒಂದರಲ್ಲಿ ಸುರಕ್ಷಿತವಾಗಿದ್ದು, ಶೀಘ್ರ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.
ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಕೆ ಶಿವರಾಜ್ ಅವರು ಅದೇ ಹೋಟೆಲ್ ನಲ್ಲಿ ಇರುವುದರಿಂದ ಸಿಂಧನೂರಿನ ಅವರ ಕುಟುಂಬದವರು ಮತ್ತು ಅಭಿಮಾನಿಗಳು ಆತಂಕ ಪಡುವಂತಾಗಿದೆ.

