ಕರ್ನಾಟಕದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಜನಸಂಖ್ಯೆ ಹೆಚ್ಚಳ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿಸ್ತರಣೆ ಮತ್ತು ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಈ ಹೊಸ ಠಾಣೆಗಳ ಸ್ಥಾಪನೆ ಅಗತ್ಯವಾಗಿದೆ.
ಹೊಸ ಠಾಣೆಗಳು ಸ್ಥಾಪನೆಯಾಗುವುದರಿಂದ ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು ಇನ್ನಷ್ಟು ಸಮೀಪದಲ್ಲಿ ಲಭ್ಯವಾಗಲಿದ್ದು, ಅಪರಾಧ ನಿಯಂತ್ರಣ ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ವಿಶೇಷವಾಗಿ ಕೆಲವು ಪ್ರದೇಶಗಳಲ್ಲಿ ಸಂಚಾರ ಪೊಲೀಸ್ ಠಾಣೆಗಳು ಆರಂಭವಾಗುವುದರಿಂದ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣ ಇನ್ನಷ್ಟು ಸುಧಾರಣೆಯಾಗಲಿದೆ.
ಸ್ಥಾಪನೆಗೊಳ್ಳುವ ಪೊಲೀಸ್ ಠಾಣೆಗಳು ಈ ಕೆಳಗಿನಂತಿವೆ :
• ದಕ್ಷಿಣ ಕನ್ನಡ ಜಿಲ್ಲೆ – ಮಾಣಿ ಪೊಲೀಸ್ ಠಾಣೆ
• ದಕ್ಷಿಣ ಕನ್ನಡ ಜಿಲ್ಲೆ – ಸಜಿಪನಡು ಪೊಲೀಸ್ ಠಾಣೆ
• ಬೆಂಗಳೂರು ಗ್ರಾಮಾಂತರ ಜಿಲ್ಲೆ – ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
• ಬೆಳಗಾವಿ ಜಿಲ್ಲೆ – ಯರಗಟ್ಟಿ ಪೊಲೀಸ್ ಠಾಣೆ
• ಯಾದಗಿರಿ ಜಿಲ್ಲೆ – ಕಕ್ಕೇರಾ ಪೊಲೀಸ್ ಠಾಣೆ
• ಚಿತ್ರದುರ್ಗ ಜಿಲ್ಲೆ – ಹಿರಿಯೂರು ಸಂಚಾರ ಪೊಲೀಸ್ ಠಾಣೆ
• ದಾವಣಗೆರೆ ಜಿಲ್ಲೆ – ಆನಗೋಡು ಪೊಲೀಸ್ ಠಾಣೆ
• ಹಾವೇರಿ ಜಿಲ್ಲೆ – ತಿಳುವಳ್ಳಿ ಪೊಲೀಸ್ ಠಾಣೆ
• ಮೈಸೂರು ಜಿಲ್ಲೆ – ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
• ವಿಜಯಪುರ ಜಿಲ್ಲೆ – ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ
• ಕೋಲಾರ ಜಿಲ್ಲೆ – ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
• ಚಾಮರಾಜನಗರ ಜಿಲ್ಲೆ – ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ
ಈ ಹೊಸ ಪೊಲೀಸ್ ಠಾಣೆಗಳ ಮೂಲಕ ಜನರ ಭದ್ರತೆ ಹೆಚ್ಚುವುದರ ಜೊತೆಗೆ ಅಪರಾಧಗಳ ತಡೆಗಟ್ಟುವಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚಿನ ಬಲ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
