ಸಮೀಪದ ಶಿವಪುರ ತುಂಗಭದ್ರಾ ನದಿ ದಡದಲ್ಲಿರುವ ಮಾರ್ಕಂಡೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ಆರಂಭವಾಗಲಿದೆ.ಕಂದಾಯ ಇಲಾಖೆಯ ಅಧೀನದಲ್ಲಿರುವ ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಲ್ಲಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತದೆ.ಭಾನುವಾರ ಸಂಜೆ 6 ಗಂಟೆಗೆ ಶಿವಪುರ ಗ್ರಾಮದಿಂದ ಮಾರ್ಕಂಡೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ವಿವಿಧ ವಾದ್ಯಮೇಳ ಕುಂಭ, ಕಳಸದೊಂದಿಗೆ ನಡೆಯಲಿದೆ. ಅಹೋರಾತ್ರಿ ಶಿವಭಜನೆ ಹಾಗೂ ಜಾಗರಣೆ ನಡೆಯುತ್ತದೆ. ಸೋಮವಾರ ಬೆಳಗಿನ ಜಾವ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ನಂತರ ಉಚ್ಚಾಯ ಉತ್ಸವ, ಅನ್ನ ಸಂತರ್ಪಣೆ ಜರಗಲಿದೆ.

ಸಂಜೆ 5 ಗಂಟೆಗೆ ಡೊಳ್ಳು ಸಹಿತ ವಿವಿಧ ವಾದ್ಯಮೇಳದೊಂದಿಗೆ ಮಹಾರಥೋತ್ಸವ ಜರುಗಲಿದೆ.

ನಾಟಕ ಪ್ರದರ್ಶನ: ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ 10.30 ಗಂಟೆಗೆ ಶಿವಪುರ ಗ್ರಾಮದಲ್ಲಿ ‘ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವಿದೆ ಎಂದು ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *