ರಾಯಚೂರು ಫೆಬ್ರವರಿ 13 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿದ ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದಲ್ಲಿ ಮಾಹಿತಿ ಹಕ್ಕು ಕಾಯ್ದೆ 2005, ಕಲಂ 19(3) ರನ್ವಯ ಸಲ್ಲಿಕೆಯಾಗುವ ದ್ವೀತಿಯ ಮೇಲ್ಮನವಿ ಅರ್ಜಿಗಳನ್ನು ಇನ್ಮುಂದೆ ಕಲ್ಬುರ್ಗಿ ಪೀಠದಲ್ಲಿ ಸ್ವೀಕರಿಸಲಾಗುವುದು ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮುಂಚೆ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ವಿಜಯನಗರ ಯಾದಗಿರಿ ಜಿಲ್ಲೆಗಳು ವ್ಯಾಪ್ತಿಯಲ್ಲಿನ ದ್ವಿತೀಯ ಮೇಲ್ಮನವಿಗಳನ್ನು ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದಲ್ಲಿ ಸಲ್ಲಿಸಬೇಕಿತ್ತು. ಆದರೆ, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಲು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಅರ್ಜಿದಾರರು ತಮ್ಮ ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 19(3) ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಇನ್ಮುಂದೆ ಕರ್ನಾಟಕ ಮಾಹಿತಿ ಆಯೋಗ, ಕಲ್ಬುರ್ಗಿ ಪೀಠ, ಮಹಲ್-ಎ-ಶಾಹಿ ಅತಿಥಿ ಗೃಹ, ಹಳೆಯ ಪಿ.ಡಬ್ಲ್ಯೂ.ಡಿ.ಐ.ಬಿ ಅವರಣ, ರೈಲ್ವೆ ಸ್ಟೇಷನ್ ಎದುರುಗಡೆ ಕಲಬುರಗಿ ಇಲ್ಲಿ ಸಲ್ಲಿಸಬಹುದಾಗಿದೆ ಎಂದು ಪೀಠದ ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
