ಸಿಂಧನೂರು: ಅಂತರರಾಷ್ಟ್ರೀಯ ದಂತವೈದ್ಯರ ದಿನದ ಅಂಗವಾಗಿ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಮಕ್ಕಳಿಗಾಗಿ ಉಚಿತ ದಂತ ತಪಾಸಣೆ ಮತ್ತು ಹಲ್ಲುಗಳ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಿಂಧನೂರಿನ ದಂತ ವೈದ್ಯರಾದ ಡಾ. ಮನ್ಸೂರ್ ಅವರ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿ, ಮಕ್ಕಳಿಗೆ ಸಮಗ್ರ ದಂತ ತಪಾಸಣೆ ನಡೆಸಿದರು. ಹಲ್ಲುಗಳ ಆರೈಕೆ, ಮೌಖಿಕ ನೈರ್ಮಲ್ಯದ ಮಹತ್ವ, ದಿನನಿತ್ಯ ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವ ವಿಧಾನ ಹಾಗೂ ನಿಯಮಿತ ದಂತ ತಪಾಸಣೆಯ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉತ್ಸಾಹದಿಂದ ತಪಾಸಣೆಗೆ ಒಳಗಾಗಿದ್ದು, ತಮ್ಮ ದಂತ ಆರೋಗ್ಯದ ಕುರಿತು ಅರಿವು ಪಡೆದುಕೊಂಡರು. ಕೆಲ ಮಕ್ಕಳಿಗೆ ಅಗತ್ಯವಿರುವ ಮುಂದಿನ ಚಿಕಿತ್ಸೆಗಳ ಕುರಿತು ಸಲಹೆ ನೀಡಲಾಯಿತು.
ನಂತರ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಮನ್ಸೂರ್ ಅವರು ಅಂತರರಾಷ್ಟ್ರೀಯ ದಂತವೈದ್ಯರ ದಿನವನ್ನು ಪ್ರತಿ ವರ್ಷ ಫೆಬ್ರವರಿ 9ರಂದು ಆಚರಿಸಲಾಗುತ್ತದೆ. ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಆರೋಗ್ಯಕರ ನಗುವನ್ನು ರೂಪಿಸುವಲ್ಲಿ ದಂತವೈದ್ಯರು ನೀಡುವ ಅಮೂಲ್ಯ ಸೇವೆಯನ್ನು ಗೌರವಿಸುವುದೇ ಈ ದಿನದ ಉದ್ದೇಶವಾಗಿದೆ.
ಈ ದಿನವು ಮೌಖಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ನಿಯಮಿತ ದಂತ ತಪಾಸಣೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಒಟ್ಟಾರೆ ಆರೋಗ್ಯಕ್ಕೆ ದಂತ ವೃತ್ತಿಪರರ ಕೊಡುಗೆಯನ್ನು ಗುರುತಿಸುವುದಕ್ಕೆ ಸಹಾಯಕವಾಗುತ್ತದೆ.ಎಂದು ತಿಳಿಸಿದರು..
ಈ ಕಾರ್ಯಕ್ರಮದಲ್ಲಿ ಸನ್ ರೈಸ್ ಕಾಲೇಜಿನ ಅಧ್ಯಕ್ಷರಾದ ಇರ್ಫಾನ್ ಕೆ , ಕಾರ್ಯದರ್ಶಿಯಾದ ಇರ್ಷಾದ್, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಲಾಜರ್ ಸಿರಿಲ್, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಚಕ್ರವರ್ತಿ ಡಿ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ವಾಸೀಮ್ ಹುಸೇನ್ ಉಪನ್ಯಾಸಕರಾದ ವೀರೇಶ್, ಜ್ಞಾನೇಶ್ವರಿ, ರಾಜೇಶ್, ಅಶು ಪಾಷಾ, ವೀರೇಶ್ವರಿ, ಶೋಭಾ, ಚೈತ್ರ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ದಂತ ವೈದ್ಯರು ನೀಡಿದ ಸೇವೆಯನ್ನು ಶ್ಲಾಘಿಸಿ, ಕಾಲೇಜಿನ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಈ ರೀತಿಯ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದರು.



