ನಗರದ ಐತಿಹಾಸಿಕ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಖುದ್ವತುಲ್ ಆಸ್ಫಿಯಾ ಸರ್ಕಾರ ಸೈಯದ್ ಶಾಹ್ ಹಜ್ರತ್ ಮರ್ದಾನೆ ಗೈಬ್ ಅವರ ‘ಉರುಸ್-ಎ-ಷರೀಫ್’ ಕಾರ್ಯಕ್ರಮವು ಫೆ.6, 7 ರವರೆಗೆ ಅತ್ಯಂತ ಸಡಗರದಿಂದ ಜರುಗಲಿದೆ ಎಂದು ಹಜರತ್ ಮರ್ದಾನೆಗೈಬ್ ನಿರ್ವಹಣಾ ಕಮಿಟಿಯ ಎಂ. ಪಾಷಾ ಕಾಟನ್ ತಿಳಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉರುಸ್ ಅಂಗವಾಗಿ ಸಾರ್ವಜನಿಕ ಸೇವಾ ಕಾರ್ಯದಡಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಗಂಧೋತ್ಸವ ಕಾರ್ಯಕ್ರಮವು ಫೆ.5ಕ್ಕೆ ಮುಗಿದಿದ್ದು, ಇಂದು ಫೆ 6 ರಂದು ಸಂಜೆ 6 ಗಂಟೆಗೆ ಭವ್ಯ ಉರುಸ್ ಹಾಗೂ ಸಾರ್ವಜನಿಕ ಸಮಾರಂಭ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಗುಲರ್ಬಗಾ ಬಾರ್ಗಾಹೆ ಬಂದಾನವಾಜ್ನ ಷರೀಫ್ ಸೈಯ್ಯದ್ ಷಾ ಅಲಿ ಅಲ್ ಹುಸೇನಿ ಖೀಬ್ಲಾ ಸಜ್ಜಾದಾ ನಷೀನ್, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಅಲ್ಲಾಮಾ ಮೌಲಾನಾ ಮುಫ್ತಿ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕೀನಿ ವಹಿಸಲಿದ್ದಾರೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರಾದ ಜಮೀರ್ ಅಹ್ಮದ್ ಖಾನ್, ಶಿವರಾಜ ತಂಗಡಗಿ, ಸಂಸದ ಕೆ. ರಾಜಶೇಖರ್ ಹಿಟ್ನಾಳ ಸೇರಿದಂತೆ ಜಿಲ್ಲೆಯ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫೆ. 7 ಕ್ಕೆ ಫಾತಹಾ ಖ್ವಾನಿ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮಾರೋಪ ಜರುಗಲಿದೆ ಎಂದು ಮಾಹಿತಿ ನೀಡಿದರು.
ಮೊಹಮ್ಮದ್ ಮುನಿರುದ್ದಿನ್, ಇಕ್ಬಾಲ್ ಸಿದ್ದಿಕಿ, ಮಾನ್ವಿ ಪಾಷಾ, ಅಯೂಬ್ ಅಡ್ಡೆವಾಲೆ ಇದ್ದರು.

