ಮಸ್ಕಿ,ಜ,27:- ಮಸ್ಕಿ ಪಟ್ಟಣದ ಸೋಮನಾಥ ನಗರ ಹಾಗೂ ಪಿಂಜಾರ್ ಓಣಿಯಲ್ಲಿ ಜನವರಿ 25ರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಯಿಂದ ಏಳು ಜನ ಮಕ್ಕಳು ಮತ್ತು ಮೂವರು ಹಿರಿಯ ನಾಗರಿಕರುಗಾ ಯಗೊಂಡಿರುವ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ಜನರು ಭಯಭೀತ ಸ್ಥಿತಿಯಲ್ಲಿ ಬದುಕುವಂತಾಗಿದೆ. ಮಕ್ಕಳನ್ನು ಹೊರಗೆ ಬಿಡಲು ಪೋಷಕರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಯುಶ್ ವೈದ್ಯರಾದ ಶ್ರೀದೇವಿ ಹಾಗೂ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮಹೇಶ ಅವರು ಜನವರಿ 26 ರಂದು ಪುರಸಭೆ ಮಸ್ಕಿಗೆ ಪತ್ರ ಬರೆದು ಮಹತ್ವದ ಮನವಿ ಸಲ್ಲಿಸಿದ್ದಾರೆ. ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡಬೇಕು, ಅವುಗಳಿಗೆ ಲಸಿಕೆ ಹಾಕಿ ನಾಯಿಗಳ ಹಾವಳಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜನರ ಸುರಕ್ಷತೆಗಾಗಿ ಪುರಸಭೆ ಮತ್ತು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ವರದಿ: ಸುರೇಶ್ ಬಳಗಾನೂರು
