ರಾಯಚೂರು ಜನವರಿ 19 (ಕರ್ನಾಟಕ ವಾರ್ತೆ): ಸಾಮಾನ್ಯ ಜೀವನ ನಡೆಸಿದ ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು.
ಜನವರಿ 19ರ ಸೋಮವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 19ರಂದು ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಳ ಸಾಧು ಜೀವನದ ನಡೆಸಿದ ವೇಮನರಂತಹ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು.
ಈ ಸಮಾಜದ ಬಂಧುಗಳ ಬೇಡಿಕೆಯಂತೆ ಸಿ.ಎ ಸೈಟ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ವೇಮನ ಮಂದಿರ ನಿರ್ಮಾಣವಾಗಲಿದೆ. ವೇಮನ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಶಾಸಕರು ಘೋಷಣೆ ಮಾಡಿದರು.
ಈ ವೇಳೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ಮಾತನಾಡಿ, ಮಹಾಯೋಗಿ ವೇಮನರು ಆಧ್ಯಾತ್ಮಿಕ ಜೀವನಕ್ಕೆ ಬರಲು ಹೇಮರೆಡ್ಡಿ ಮಲ್ಲಮ್ಮ ಅವರು ಕಾರಣರಾದರು. ಸಮಾಜದ ಏಳಿಗೆಗೆ ಅವರು ಶ್ರಮಿಸಿದ್ದು, ಎಲ್ಲ ಭಾರತೀಯರು ಸೇರಿ ವೇಮನ ಜಯಂತಿ ಆಚರಣೆ ಮಾಡಬೇಕು. ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಆಚಾರ, ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕೆಂದು ಹೇಳಿದರು.
ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಮಹತ್ವದ ಪಾತ್ರವಹಿಸಿದ್ದು, ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ. ಅವರ ಆಡು ಭಾಷೆಯ ಪದ್ಯಗಳಲ್ಲಿನ ತತ್ವಗಳು ಮನಪರಿವರ್ತನೆಗೊಳಿಸುವ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮಹಿಪಾಲರೆಡ್ಡಿ ಅವರು ಮಾತನಾಡಿ, ತೆಲುಗಿನ ನಾಡಗೀತೆಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಅವರು ಹೆಸರನ್ನು ಉಲ್ಲೇಖಿಸಲಾಗಿದೆ. ರೆಡ್ಡಿ ಎನ್ನುವುದು ನಾಯಕತ್ವದ ಪರ್ಯಾಯ ಹೆಸರಾಗಿದ್ದು, ರೆಡ್ಡಿ ಎಂಬ ಪದವು ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಚಾಲ್ತಿಗೆ ಬಂದಿದೆ. ಸಮಾಜದವರು ಎಲ್ಲರೂ ಒಗ್ಗಟ್ಟನಿಂದ ಸಮಾಜವನ್ನು ಸಂಘಟಿಸಬೇಕು. ಧಾರವಾಹಿ ಮೂಲಕ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಇತಿಹಾಸವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ವೇಮನ ಪದ್ಯಗಳು ಸುಮಾರು 20 ಸಾವಿರ ಇರಬಹುದು ಎಂದು ಹೇಳಲಾಗಿದೆ. 20 ಸಾವಿರ ಪೈಕಿ 6 ಸಾವಿರ ಪದ್ಯಗಳು ಮುದ್ರಣಗೊಂಡಿದ್ದು, ಇನ್ನೂ 14 ಸಾವಿರ ಪದ್ಯಗಳು ಸಂಶೋಧನೆಗೆ ಒಳಪಡಿಸಲಾಗಿದೆ. ಗದಗ ಜಿಲ್ಲೆಯ ಎಸ್.ಆರ್.ಪಾಟೀಲ್ ಅವರು ಸುಮಾರು ನಾಲ್ಕು ಸಾವಿರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ರೆಡ್ಡಿ ಅಭಿವೃದ್ಧಿ ನಿಗಮ ಹಾಗೂ ರೆಡ್ಡಿ ಪ್ರಾಧಿಕಾರವನ್ನು ಸರ್ಕಾರದಿಂದ ಸ್ಥಾಪಿಸಿಬೇಕೆಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ಗಣ್ಯರಿಂದ ವಿದ್ಯಾರ್ಥಿಗಳಾದ ಸ್ಪೂರ್ತಿ ತಂದೆ ನರಸಿಂಹ ರೆಡ್ಡಿ, ಸಾಯಿ ರಘುಪತಿ ರೆಡ್ಡಿ, ಆಕಾಂಕ್ಷಾ ರೆಡ್ಡಿ ತಂದೆ ಪ್ರಕಾಶ್ ರೆಡ್ಡಿ, ಅನನ್ಯ ತಂದೆ ವಿಕ್ರಮ್ ರೆಡ್ಡಿ, ಕೀರ್ತಿ ತಂದೆ ಪ್ರಾಣೇಶ್ ರೆಡ್ಡಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಜಗದೀಶ್, ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್, ಸಮಾಜದ ಮುಖಂಡರಾದ ಜಿ.ರಾಮಚಂದ್ರ ರೆಡ್ಡಿ, ಅಚ್ಚುತ್ ರೆಡ್ಡಿ, ಡಾ.ಭೀಮನಗೌಡ, ಚಂದ್ರಶೆಖರ ರೆಡ್ಡಿ, ಭೀಮೇಶ್ ನಾಯ್ಕ್, ರಾಮನಗೌಡ ಏಗನೂರು, ಕೇಶವ ರೆಡ್ಡಿ, ದಂಡಪ್ಪ ಬಿರಾದಾರ್ ಸೇರಿದಂತೆ ಇತರರು ಇದ್ದರು


