ರಾಯಚೂರು ಜನವರಿ 06 (ಕರ್ನಾಟಕ ವಾರ್ತೆ): ನಾವೆಲ್ಲರೂ ಒಂದೇ ಎಂದು ತಿಳಿಸುವ, ದೇಶ-ಕಾಲವನ್ನು ಮೀರಿದ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರು ಅರಿತು ನಡೆಯೋಣ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜನವರಿ 6ರಂದು ನಡೆದ ವಿಶ್ವಮಾನವ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗೌತಮ ಬುದ್ಧರ ಅಹಿಂಸಾ ತತ್ವ, ಬಸವಣ್ಣನವರ ಕಾಯಕದ ಮಹತ್ವ, ವಾಲ್ಮೀಕಿಯ ಮಾನವ ಕುಲ ತಾನೊಂದೇ ವಲಂ ಸಂದೇಶ, ಜೀವಕ್ಕೆ ಯಾವ ಕುಲ ಎನ್ನುವ ಕನಕದಾಸರ ನೀತಿ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವ, ಸಮಾನತೆಯ ಕಲ್ಪನೆಯಡಿ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರಂತ ಅನೇಕ ಮಹನಿಯರ ಆಶಯ, ಸಂದೇಶ, ಮೌಲ್ಯಗಳನ್ನು ಕುವೆಂಪು ಅವರ ಬರೆಹದಲ್ಲಿ ಕಾಣಬಹುದಾಗಿದೆ. ಜೀವನ ಪ್ರೀತಿ ಹೊಂದು, ಸರ್ವರನ್ನೂ ಪ್ರೀತಿಸು ಎನ್ನುವ ಅನಿಕೇತನ ಸಂದೇಶದ ಕುವೆಂಪು ಅವರು ನೀಡಿದ ವಿಶ್ವಮಾನವ ಸಂದೇಶವು, ಸಂಕೀರ್ಣವಾಗುತ್ತಿರುವ ಇಂದಿನ ಸಮಾಜಕ್ಕೆ ಔಷಧಿಯಂತಿದೆ ಎಂದು ಅವರು ತಿಳಿಸಿದರು.
ಹಿರಿಯ ಚಿಂತಕರು ಹಾಗೂ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ವೆಂಕಟರಾವ್ ಕುಲಕರ್ಣಿ ಅವರು ವಿಶೇಷ ಉಪನ್ಯಾಸ ನೀಡಿ, ಕುವೆಂಪು ಅವರನ್ನು ನಾವು ಕವಿ ಎನ್ನುತ್ತೇವೆ. ಆದರೆ, ಅವರು ಕವಿಯಾಗಿರುವುದರ ಜೊತೆಗೆ ಅಸಾಧಾರಣ ಓದುಗರಾಗಿದ್ದರು. ಕುವೆಂಪು ಅವರು ಕನ್ನಡಕ್ಕಾಗಿಯೇ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟರು. ಸಾಹಿತ್ಯದ ಎಲ್ಲ ಪ್ರಕಾರದಲ್ಲೂ ಕೃಷಿ ಮಾಡಿದರು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪು ಅವರು ಓದದ ಗ್ರಂಥವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಧ್ಬುತ ಓದುಗರಾಗಿದ್ದರು. ಗ್ರಂಥಾಲಯಕ್ಕೆ ಬರುವ ಎಲ್ಲ ಹೊಸ ಹೊಸ ಪುಸ್ತಕಗಳನ್ನು ಆಯಾ ದಿನವೇ ಓದಿ ಮುಗಿಸುತ್ತಿದ್ದರು ಎಂದು ತಿಳಿಸಿದರು.
ಹಿರಿಯ ಸಾಹಿತಿ ವೀರ ಹನುಮಾನ ಅವರು ಮಾತನಾಡಿ, 20ನೇ ಶತಮಾನವು ಕಂಡ ದೈತ್ಯ ಪ್ರತಿಭೆ ಕುವೆಂಪು ಆಗಿದ್ದಾರೆ. ಪ್ರತಿಯೊಂದು ಭಾಷೆಗೂ ಭಾಷಾಂತರವಾಗುವ ಮಹತ್ವದ ಕೃತಿಗಳನ್ನು ಕುವೆಂಪು ಪ್ರಕಟಿಸಿದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಕನ್ನಡ ಪರ ಸಂಘಟನೆಯ ಸಿ.ಕೆ.ಜೈನ್, ಹಿರಿಯ ಚಿತ್ರ ಕಲಾವಿದರಾದ ಮ್ಯಾದರ್ ಹಾಗೂ ಇನ್ನೀತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾವುತರಾವ್ ಬರೂರು ಸ್ವಾಗತಿಸಿದರು. ಹಿರಿಯ ಗಾಯಕಿ ಪ್ರತಿಭಾ ಗೋನಾಳ ನಾಡಿಗೀತೆ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೇರಿದಂತೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇನ್ನೀತರರು ಇದ್ದರು.

