ರಾಯಚೂರು ಜನವರಿ 05 (ಕರ್ನಾಟಕ ವಾರ್ತೆ): ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಮತ್ತು ಸನ್ನದುದಾರರಿಗೆ ತರಬೇತಿ ಕಾರ್ಯಕ್ರಮವು ಜನವರಿ 5ರಂದು ನಡೆಯಿತು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಆಡಿಟೋರಿಯಂ ಹಾಲನಲ್ಲಿ ಅಬಕಾರಿ ಇಲಾಖೆಯಿಂದ ನಡೆದ ತರಬೇತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಅಬಕಾರಿ ಇಲಾಖೆಯ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವಾದ ಮತ್ತು ರಾಜ್ಯದಲ್ಲಿ ಸ್ಥಗಿತಗೊಂಡಿರುವ ಒಟ್ಟು 477 ಸಿಎಲ್-2ಎ ಮತ್ತು 92 ಸಿಎಲ್-9ಎ ಸನ್ನದುಗಳನ್ನು ಘನ ಸರ್ಕಾರವು ಈ ಹರಾಜು ಮೂಲಕ ವಿಲೇವಾರಿ ಮಾಡಲು ಉದ್ದೇಶಿಸಿ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಇಂತಿಷ್ಟು ಎಂದು ಸನ್ನದುಗಳ ಹಂಚಿಕೆ ಮಾಡಲಾಗಿದೆ. ಈ ಸನ್ನದುಗಳನ್ನು ಹೇಗೆ ಯಾವ ರೀತಿಯಲ್ಲಿ ಈ ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ರಾಯಚೂರು ಹಾಗೂ ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯಿಂದ ಹಮ್ಮಿಕೊಂಡ ಈ ತರಬೇತಿ ಮಹತ್ವದ್ದಾಗಿದ್ದು, ಸಾರ್ವಜನಿಕರು ಮತ್ತು ಸನ್ನದುದಾರರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಕೆ. ಪ್ರಶಾಂತಕುಮಾರ ಅವರು ಪ್ರಾಸ್ತಾವಿಕ ಮಾತನಾಡಿ, ರಾಯಚೂರು ಜಿಲ್ಲೆಗೆ ಒಟ್ಟು 08 ಸಿಎಲ್-2ಎ ಮತ್ತು 1 ಸಿಎಲ್-9ಎ ಸನ್ನದುಗಳ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಂಸ್ಥೆಯಾದ ಎಂಎಸ್ಟಿಸಿ ಸಂಸ್ಥೆಯ ತಂತ್ರಜ್ಞರಿಂದ ಇ-ಹರಾಜು ಪ್ರಕ್ರಿಯೆ ಬಗ್ಗೆ ತಿಳಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಇ-ಹರಾಜು ಪ್ರಕ್ರಿಯೆ, ತಿದ್ದುಪಡಿಯಾದ ಕಾನೂನುಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸತೀಶಕುಮಾರ ಅವರು ಮಾತನಾಡಿ, ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ವೆಬ್ ಪೋರ್ಟಲ್ ಮಾಹಿತಿ ಹಾಗೂ ಇ-ಹರಾಜು ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ರಾಯಚೂರು ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಸಿ.ಕೆ.ಮಹೇಂದ್ರ, ಸಹಾಯಕ ಉಪ ಆಯುಕ್ತರಾದ ಕೆ ರವಿ ಸೇರಿದಂತೆ, ಅಬಕಾರಿ ಇಲಾಖೆಯ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

