ರಾಯಚೂರು ಜನವರಿ 04 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯು ವಿಶೇಷವಾಗಿ ಆಯೋಜಿಸಿರುವ ವಿವಿಧ ಐಇಸಿ ಚಟುವಟಿಕೆಗಳ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರು ಮಹಾನಗರ ಪಾಲಿಕೆಯಿಂದ ರಾಯಚೂರು ನಗರದ ಸ್ವಚ್ಛತಾ ಅಭಿಯಾನದ ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವರು ಹಾಗೂ ಶಾಸಕರು ಸಹಿ ಮಾಡಿ ಚಾಲನೆ ನೀಡಿದರು.
ರಾಯಚೂರ ನಗರ ಶುಚಿತ್ವಕ್ಕಾಗಿ ಜನವರಿ 12ರಂದು ಆಯೋಜಿಸಿರುವ ಸ್ವಚ್ಛತಾ ಓಟದ ಅಂಗವಾಗಿ ರೂಪಿಸಲಾಗಿದ್ದ ಸೆಲ್ಫಿ ಸ್ಟ್ಯಾಂಡನಲ್ಲಿ ಸಚಿವರು ಹಾಗೂ ಶಾಸಕರು ಭಾವಚಿತ್ರ ತೆಗೆಯಿಸಿಕೊಂಡರು. ಇದೆ ವೇಳೆ ವೇದಿಕೆಯ ಕಾರ್ಯಕ್ರಮ ನಡೆಯಿತು.
ಸಚಿವರು ಹಾಗೂ ಶಾಸಕರು ಮತ್ತು ಅಧಿಕಾರಿಗಳು ಸ್ವಚ್ಛತಾ ಓಟ ಸಂದೇಶದ ಕ್ಯಾಪ್ ಟಿ-ಶರ್ಟ್ ಬಿಡುಗಡೆ ಮಾಡಿದರು. 2026ರ ನೂತನ ಕ್ಯಾಲೆಂಡರ್ ಗಳನ್ನು ಸಹ ಲೋಕಾರ್ಪಣೆ ಮಾಡಿದರು. ಇದೆ ವೇಳೆ ಸ್ವಚ್ಛತಾ ಓಟದ ಪೋಸ್ಟರಗಳನ್ನು ಸಹ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಪಾಲಿಕೆಯ ವಲಯ ಆಯುಕ್ತರಾದ ಮಲ್ಲಿಕಾರ್ಜುನ ಬಿ.ಎಂ., ಪಾಲಿಕೆಯ ಅಧಿಕಾರಿ ಕೃಷ್ಣ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.



