ಅರಕೇರಾ:
ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವರ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಶ್ರೀ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವ ಎಳ್ಳ ಅಮವಾಸ್ಯೆಯ ಆರನೇ ದಿನ ನಡೆಯುವ ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ಚಿಕ್ಕ ಮಕ್ಕಳು, ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸತತ ಎರಡು ಗಂಟೆಗೂ ಅಧಿಕ ಸಮಯ ಹಾಲುಗಂಬ ಉತ್ಸವ ಸ್ಪರ್ಧೆ ನಡೆಯಿತು. ಒಬ್ಬರ ಮೇಲೆ ಒಬ್ಬರು ಹಾಲುಗಂಬ ಹತ್ತುತ್ತಾ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನು ಕಂಡು ನೆರೆದಿದ್ದ ಯುವಕರು ಶಿಳ್ಳೆ, ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು.
ಹಲುಂಗಬಕ್ಕೆ ಎರಚುತ್ತಿದ್ದ ನೀರಿನ ರಸಭಸಕ್ಕೆ ಕಂಬ ಹತ್ತಲು ಹರಸಾಹಸ ಪಡುವಂತಾಯಿತು. ಬಸವರಾಜ ಪಿಲಿಗುಂಡ ಅವರ ಕಂಬ ಹತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು.
ಶ್ರೀ ಮಾರುತೇಶ್ವರ ದೇವಸ್ಥಾನದ ಸಮಿತಿಯವರು ಪ್ರಥಮ ಸ್ಥಾನ ಪಡೆದ ವ್ಯಕ್ತಿಗೆ ಬೆಳ್ಳಿ ಕಡಗ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನೂತನವಾಗಿ ತಯಾರಿಸಿದ ಹಾಲುಗಂಬವನ್ನು ಎಳ್ಳು ಅಮಾವಾಸ್ಯೆಯ ಮರುದಿನ ಶ್ರೀ ಮಾರುತೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಸ್ಥಾಪಿಸಲಾಯಿತು. ಬುಧವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಶ್ರೀ ಮಾರುತೇಶ್ವರ ಮೂರ್ತಿಗೆ ಎಲೆ ಪೂಜೆ ಜೊತೆಗೆ ವಿಶೇಷ ಪೂಜೆಗಳು ನಡೆದವು. ಸುತ್ತಲಿನ ತಾಂಡಾಗಳಿಂದ, ವಿವಿಧ ಗ್ರಾಮಗಳ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದರು.

