ಸಿಂಧನೂರು : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂಧನೂರು ತಾಲೂಕಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಡಿ.ಹೆಚ್.ಕಂಬಳಿ ಬೆಂಬಲಿತ ಬಣದ ಅಧ್ಯಕ್ಷರಾಗಿ ಶರಣಪ್ಪ ಗೋನಾಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು ಆಯ್ಕೆಯಾಗಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಗೂ 7 ಕಾರ್ಯಕಾರಿ ಮಂಡಳಿ ಸ್ಥಾನಕ್ಕೆ ಮಾತ್ರ ಮತದಾನ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶರಣಪ್ಪ ಗೋನಾಳ ಹಾಗೂ ಮಹ್ಮದ್ ಮುಸ್ತಫಾ ಸ್ಪರ್ಧಿಸಿದ್ದರು. 24 ಜನ ಸದಸ್ಯರ ಬಲದ ಸಂಘಕ್ಕೆ 23 ಜನ ಮತದಾನ ಚಲಾಯಿಸಿದರು. ಶರಣಪ್ಪ ಗೋನಾಳ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮಹ್ಮದ್ ಮುಸ್ತಫಾ 10 ಮತಗಳನ್ನು ಪಡೆದು ಸೋಲು ಕಂಡರು.
ಅದರಲ್ಲಿ ಒಂದು ಮತ ತಿರಸ್ಕೃತಗೊಂಡಿತು.
ಇನ್ನೂ ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು, ಉಪಾಧ್ಯಕ್ಷರಾಗಿ ಯಮನಪ್ಪ ಪವಾರ್, ದುರುಗೇಶ, ಖಜಾಂಚಿಯಾಗಿ ಚಂದ್ರಶೇಖರ ಬೆನ್ನೂರು, ಕಾರ್ಯದರ್ಶಿಯಾಗಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ಇನ್ನೂ ಕಾರ್ಯಕಾರಿ ಸಮಿತಿ 7 ಸ್ಥಾನಕ್ಕೆ 13 ಜನ ಸ್ಪರ್ಧಿಸಿದ್ದರು. ಡಿ.ಹೆಚ್.ಕಂಬಳಿ, ಪ್ರಹ್ಲಾದ್ ಗುಡಿ, ಚನ್ನಬಸವ, ವೀರೇಶ ಗಡ್ಡಿಮಾಳ, ತಲಾ 14 ಮತಗಳನ್ನು ಪಡೆದರು. ಎಂ.ಡಿ.ಮುಸ್ತಫಾ ತುರ್ವಿಹಾಳ 19, ನವಾಬ್ ಷರೀಫ್ 15, ಬಿ.ಶಾಮಕುಮಾರ 12 ಮತಗಳನ್ನು ಪಡೆದು ಜಯಶಾಲಿಗಳಾದರು.
ಶಿವರಾಜ ಕೆ(7), ಖಾಸೀಮ್ ಸಾಬ್(8), ವೀರೇಶ ಹೊಸಳ್ಳಿ(7), ಲಚಮಪ್ಪ(7), ಪಂಪಾಪತಿ ಹೂವಿನಬಾವಿ(7), ಕನಕರಾಯ ಆನೆಗುಂದಿ(8) ಮತಗಳನ್ನು ಪಡೆದು ಸೋಲು ಕಂಡರು ಎಂದು ಚುನಾವಣೆಯ ನೇತೃತ್ವವನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಘೋಷಣೆ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಉಪಾಧ್ಯಕ್ಷರಾದ ಅಶೋಕ ಬೆನ್ನೂರು, ಮಹಾನಂದ, ಖಜಾಂಚಿ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಬಸವರಾಜ ಭೋಗಾವತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ ಯರದಿಹಾಳ, ಲಕ್ಷ್ಮಣ್ ಕಪಗಲ್, ಲಕ್ಷ್ಮಿಕಾಂತ ಜೈನ್, ಭಾಗವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

