ರಾಯಚೂರು ಡಿಸೆಂಬರ್ 11 (ಕರ್ನಾಟಕ ವಾರ್ತೆ): ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಯಚೂರಿನ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ರಫ್ತು ಉತ್ತೇಜನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವು ನಗರದ ಹೈದ್ರಾಬಾದ್ ರಸ್ತೆಯ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಬುಧವಾರ ಯಶಸ್ವಿಯಾಗಿ ನಡೆಯಿತು.
ಬೆಂಗಳೂರಿನ ಫಿವೋ ಉಪ ನಿರ್ದೇಶಕರಾದ ಧನೀಶಾ ಮೀನು ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ವಿಷಯಗಳು ಮತ್ತು ರಫ್ತು ವ್ಯಾಪಾರದ ಟ್ರೇಡ್ ಪಾಲಿಸಿ-2023ರ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಬೆಂಗಳೂರಿನ ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಷಿಯೇಶನ್ ಲಿಮಿಟೆಡ್ ಕಾರ್ಯದರ್ಶಿಗಳಾದ ಗಿರೀಶ್ ನಾರಾಯಣ್ ಅವರು, ರಫ್ತು ವ್ಯಾಪಾರದ ಕುರಿತು ಅಗತ್ಯ ದಾಖಲಾತಿಗಳನ್ನು ಹೇಗೆ ತಯಾರಿಸುವುದು ಹಾಗೂ ಅಂತರಾಷ್ಟ್ರೀಯ ವ್ಯಾಪಾರ, ಸುಂಕ ತೆರಿಗೆ ಈ ವಿಷಯದ ಕುರಿತು ಸವಿಸ್ತಾರವಾಗಿ ಕಾರ್ಯಾಗಾರದಲ್ಲಿ ತಿಳಿಸಿದರು.
ಈ ವೇಳೆ ಹೈದ್ರಾಬಾದಿನ ಇಸಿಜಿಸಿ ಲಿಮಿಟೆಡ್ ಸಹಾಯಕ ವ್ಯವಸ್ಥಾಪಕರಾದ ಭರತ್ ಗುಂಟೂರು ಅವರು ಮಾತನಾಡಿ, ಇನ್ವಾಯಿಸ್, ಪ್ಯಾಕಿಂಗ್ ಲಿಸ್ಟ್, ಕಸ್ಟಮ್ಸ ಕ್ಲೀಯರೆನ್ಸ್, ರಫ್ತು ವಿಮೆ ಮೂಲಕ ಸಿಗುವ ರಕ್ಷಣೆಗಳು, ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಸರಕುಗಳನ್ನು ಸುರಕ್ಷಿತವಾಗಿ ವಿದೇಶಕ್ಕೆ ಕಳುಹಿಸುವ ವಿಧಾನಗಳು ಹಾಗೂ ಡಿಜಿಟಲ್ ಮಾರ್ಕೇಟಿಂಗ್ ಆನ್ ಲೈನ್ ಮೂಲಕ ವಿದೇಶಿ ಗ್ರಾಹಕರನ್ನು ತಲುಪುವುದು ಹೇಗೆ ಎಂಬುದರ ಬಗ್ಗೆ ತಿಳಿಸಿದರು.
ಈ ವೇಳೆ ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ನಿರ್ದೇಶಕರು ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ನಿಕಟಪೂರ್ವ ಅಧ್ಯಕ್ಷರಾದ ತ್ರಿವಿಕ್ರಮ ಜೋಶಿ ಅವರು ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ರಾಯಚೂರು ಕಚೇರಿಯ ಉಪನಿರ್ದೇಶಕರಾದ ಶ್ರೀ ರಾಜಕುಮಾರ್ ಪಾಟೀಲ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ಯೋಜನೆಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ. ಸತೀಶಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ್, ಕಾಟನ್ ಮಿಲ್ಲರ್ಸ್ ಸಂಘದ ಅಧ್ಯಕ್ಷರಾದ ವಿ. ಲಕ್ಷ್ಮೀರೆಡ್ಡಿ, ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪೂರು ಇನ್ನೀತರರು ಇದ್ದರು. ಕಚೇರಿಯ ಸಹಾಯಕ ನಿರ್ದೇಶಕರಾದ ಲಕ್ಷ್ಮೀಕಾಂತ್ ಕುಲಕರ್ಣಿ ವಂದಿಸಿದರು.

Leave a Reply

Your email address will not be published. Required fields are marked *