ರಾಯಚೂರು ಡಿಸೆಂಬರ್ 10 (ಕರ್ನಾಟಕ ವಾರ್ತೆ): ಕೃಷಿ, ಕೈಗಾರಿಕೆ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಅಂತರ್ಜಲವು ಒಂದು ವಿಶ್ವಾಸಾರ್ಹ ಮೂಲವಾಗಿದೆ. ಭಾರತದಲ್ಲಿ ಅಂತರ್ಜಲವು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದ್ದು, ಅದರ ಸಮರ್ಥ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಬೆಂಗಳೂರಿನ ಸಿಜಿಡ್ಲೂಬಿ ಎಸ್.ಡ್ಲೂ.ಆರ್ನ ಪ್ರಾದೇಶಿಕ ನಿರ್ದೇಶಕರಾದ ಜಿ.ಕೃಷ್ಣಮೂರ್ತಿ ಅವರು ಹೇಳಿದರು.
ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿ ವತಿಯಿಂದ ಡಿಸೆಂಬರ್ 10ರ ಬುಧವಾರ ನಗರದ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜುಬಿಲಿ ಸೆಮಿನಾರ್ ಹಾಲ್ನಲ್ಲಿ ನಡೆದ ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತ 3ನೇ ಶ್ರೇಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅಂತರ್ಜಲದ ಬಳಕೆಯ ಪ್ರಮಾಣ ಮಿತಿ ಮೀರುತ್ತಿದ್ದು, ಇದರಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಅಂತರ್ಜಲದ ಲಭ್ಯತೆಯು ಕಡಿಮೆಯಾಗುತ್ತಿದೆ. ಅಂತರ್ಜಲವು ನೆಲದೊಳಗೆ ಭೂಮಿಯ ಮೇಲ್ಪದರಗಳಲ್ಲಿ ಶಿಥಿಲಗೊಂಡ ಶಿಲಾರಚನೆಗಳಲ್ಲಿ ಹಾಗೂ ಆಳಭಾಗಗಳಲ್ಲಿ ಬಿರುಕು ಹಾಗೂ ಅಪಾಯದ ಪರಿಸ್ಥಿತಿಯನ್ನು ತಂದೊಡ್ಡಿದೆ. ಇದರೊಂದಿಗೆ ಹಲವಾರು ಸಮಸ್ಯೆಗಳೂ ನಮಗೆ ಎದುರಾಗಿವೆ ಎಂದರು.
ಈ ವೇಳೆ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಮಾತನಾಡಿ, ಅಂತರ್ಜಲ ಕುಸಿತದಿಂದ ಎದುರಾಗಿರುವ ಸಮಸ್ಯೆ ನೀಗಿಸಿ ನೀರಿನ ಗುಣಮಟ್ಟ, ನಿರ್ವಹಣೆ ಹಾಗೂ ಸದ್ಬಳಕೆ ಬಗ್ಗೆ ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ಮಾಡಿದರು.
ಮಳೆನೀರು ಕೊಯ್ಲು, ಅಂತರ್ಜಲ ಸಂರಕ್ಷಣೆ, ಕೃತಕ ಮರುಪೂರಣ ಮತ್ತು ಜವಾಬ್ದಾರಿಯುತ ನೀರಿನ ಬಳಕೆಯ ಬಗ್ಗೆ ಜಲ ವೃತ್ತಿಪರರು, ವಿದ್ಯಾರ್ಥಿಗಳು, ಸ್ಥಳೀಯ ಎನ್ಜಿಒಗಳು, ರೈತರು, ಪಂಚಾಯತ್ ಕಾರ್ಯಕರ್ತರು ಮತ್ತು ಯುವಕರಿಗೆ 3ನೇ ಶ್ರೇಣಿ ಕಾರ್ಯಕ್ರಮಗಳು ಮತ್ತು ರೈತರು ಮತ್ತು ಗ್ರಾಮೀಣ ಸಮುದಾಯಗಳಿಗೆ ಸಾರ್ವಜನಿಕ ಸಂವಹನ ಕಾರ್ಯಕ್ರಮಗಳು (ಪಿಐಪಿ) ಮತ್ತು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳು (ಎಂಎಪಿ) ನಂತಹ ವ್ಯಾಪಕವಾದ ತಳಮಟ್ಟದ ಚಟುವಟಿಕೆಗಳ ಮೂಲಕ, ಸಾವಿರಾರು ಪಾಲುದಾರರಿಗೆ ಅರಿವು ಮೂಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜ್ ಆಫ್ ಅಗ್ರಿಕಲ್ಚರಲ್ ಎಂಜಿನಿಯರಿಂಗ್ ಡೀನ್ ಡಾ.ಎಂ.ಎಸ್. ಅಯ್ಯನಗೌಡರು, ವಿಜ್ಞಾನಿ ಡಾ.ಜೆ.ದವಿತುರಾಜ್, ಡಾ.ಎಂ.ಗೋಬಿನಾಥ, ಎನ್.ನರಸಿಂಹಲು, ಶರಣಗೌಡ ಹಿರೇಗೌಡ ಸೇರಿದಂತೆ ಇನ್ನೀತರರು ಮತ್ತು ವಿದ್ಯಾರ್ಥಿಗಳು ಇದ್ದರು.


