ರಾಯಚೂರು : ಹಗಲಿರುಳು ಕುಟುಂಬ ಏಳ್ಗೆಗಾಗಿ ಜೀವನವನ್ನು ಮುಡುಪಾಗಿಡುವ ಮನೆಯ ಮಹಿಳೆಯ ಗೌರವಕ್ಕಾಗಿ ಶೌಚಾಲಯವನ್ನು ನಿರ್ಮಿಸುವ ಜೊತೆಗೆ ಬಳಕೆಗೂ ಆಧ್ಯತೆ ನೀಡಿ ಕುಟುಂಬದ ಎಲ್ಲ ಸದಸ್ಯರು ರೋಗ ರುಜಿನಗಳಿಂದ ಸಂರಕ್ಷಿಸಲು ಮುಂದೆ ಬರಲು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸತೀಶ್ ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ ಸಹಯೋಗದೊಂದಿಗೆ ಮಟಮಾರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶೌಚಾಲಯ ಮಹತ್ವ ಕುರಿತು ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಜಾಗೃತಿ ಶಿಬಿರದಲ್ಲಿ ಮಾತನಾಡುತ್ತಾ, ಭಾರತ ಸರಕಾರವು ಸ್ವಚ್ಚ ಭಾರತ ಅಭಿಯಾನದಡಿ ದೇಶಾದ್ಯಂತ ಜನರ ಆರೋಗ್ಯ ಸುಧಾರಣೆ, ಸಾಂಕ್ರಾಮಿಕ ರೋಗ ತಡೆಯಾಗಿ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಗೆ ಒತ್ತು ನೀಡಿದ್ದು, ಬಯಲು ಶೌಚದಿಂದ ಜಂತುಹುಳು ಭಾದೆಯಿಂದ ರಕ್ತಹೀನತೆ ಉಂಟಾಗುವುದಲ್ಲದೆ, ಮಕ್ಕಳ ಬೆಳವಣಿಗೆಗೆ ಅಡೆಯಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಶೌಚಾಲಯ ನಿರ್ಮಿಸಿ ಬಳಕೆಯನ್ನು ಮಾಡಬೇಕು, ಅಲ್ಲದೆ ಊಟಕ್ಕಿಂತ ಮೊದಲು ಹಾಗೂ ಶೌಚದ ನಂತರ ತಪ್ಪದೆ ಸಾಬೂನು ಮತ್ತು ನೀರಿನಿಂದ ಕೈತೊಳೆಯಲು ಮರೆಯಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೊಪಾಧ್ಯಾಯ ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಾಲಿಂಗ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.

