ಮಸ್ಕಿ: ಡಿ 8 ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡದೂರು ಗ್ರಾಮ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಮಕ್ಕಳ ಗ್ರಾಮ ಸಭೆ ನಡೆಸಲಾಯಿತು.
ಈ ವೇಳೆ ಪಿಡಿಓ ಕೃಷ್ಣ ಹುನಗುಂದ ಮಾತನಾಡಿ, ಸಂವಿಧಾನ ಮೂಲ ಆಶಯದಂತೆ ಸ್ಥಳೀಯ ಸರ್ಕಾರಗಳು ಸ್ಥಾಪಿತವಾಗಿದ್ದು, ಗ್ರಾಮ ಪಂಚಾಯಿತಿಗಳು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸ್ಥಾಪಿತವಾದ ಸ್ವತಂತ್ರ ಕಚೇರಿಗಳಾಗಿದ್ದು, ಇಲ್ಲಿಗೆ ಮಕ್ಕಳು ಸಹ ಬಂದು ಸೌಲಭ್ಯ ಪಡೆಯಬಹುದು ಹಾಗೂ ಮಕ್ಕಳು ಇಂದಿನ ಪ್ರಜೆಗಳು ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿನಲ್ಲೇ ಹೆಚ್ಚು ಅವಕಾಶ ಕೊಡಬೇಕು. ವಿದ್ಯಾರ್ಥಿಗಳು ನೀವು ಓದುವ ಶಾಲೆ ಅಥವಾ ವಾಸಿಸುವ ಸ್ಥಳದಲ್ಲಿ ಅಗತ್ಯ ಮೂಲಭೂತ ಸೌಲಭ್ಯಕ್ಕಾಗಿ ಗ್ರಾಪಂ ಸಂಪರ್ಕಿಸಬಹುದು ಎಂದು ತಿಳಿಸಿದರು.
ನಂತರ ಅಂಗನವಾಡಿ ಮೇಲ್ವಿಚಾರಕರಾದ ರಾಧಾ.ಡಿ ಮಕ್ಕಳ ಸಹಾಯವಾಣಿ 1098 ಕುರಿತು ಮಾತನಾಡಿದರು, 18 ವರ್ಷದ ಒಳಗಿನ ಹೆಣ್ಣು ಮಗುವಿಗೆ ಅಥವಾ 21 ವರ್ಷದ ಒಳಗಿನ ಗಂಡು ಮಗುವಿನ ಮದುವೆ ಮಾಡಿದರೆ ಅದು ಬಾಲ್ಯ ವಿವಾಹ ಆ ಸಂದರ್ಭದಲ್ಲಿ ಸ್ಥಳೀಯರು 1098 ಗೆ ಕರೆ ಮಾಡಿ ಸಹಾಯ ಪಡೆಯಿರಿ ಹಾಗೂ ಆ ಊರಿನ ಶಾಲಾ ಮುಖ್ಯ ಶಿಕ್ಷಕರು ಅಥವಾ ಗ್ರಾ.ಪಂ ಪಿಡಿಓ ರವರ ಗಮನಕ್ಕೆ, ಅಥವಾ ಅಂಗನವಾಡಿ ಶಿಕ್ಷಕಿಯರ, ಮೇಲ್ವಿಚಾರಕರ ಗಮನಕ್ಕೆ ತರಲು ತಿಳಿಸಿದರು. ಹಾಗೂ ಎಲ್ಲರೂ ಕಡ್ಡಾಯವಾಗಿ ಶಾಲೆಗೆ ಹೋಗಿ ಶಿಕ್ಷಣ ಕಲಿಯಬೇಕು. ಶಾಲೆ ಬಿಟ್ಟ ಮಕ್ಕಳ ಕುರಿತು ಮಾಹಿತಿ ನೀಡಲು, ಹಾಗೂ ಕಡ್ಡಾಯ ಶಿಕ್ಷಣ, ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ ನಿಷೇಧ, ಮಕ್ಕಳ ರಕ್ಷಣೆ, ಕಾವಲು ಕುರಿತು ಸವಿಸ್ತಾರವಾಗಿ ವಿವರಣೆ ತಿಳಿಸಿದರು.
ಈ ವೇಳೆ ಮೇರನಾಳ ಅಂಗನವಾಡಿ ಕೇಂದ್ರಕ್ಕೆ ಹಾಗೂ ಪರಾಪುರ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ನೀಡಲಾಯಿತು.
ಈ ಸಂದರ್ಭದಲ್ಲಿ ಪಿಡಿಓ ಕೃಷ್ಣ ಹುನಗುಂದ, ರಮೇಶ ಹೆಡಗಿಬಾಳ್ ಕ್ಯಾಂಪ್, ಗುಡದೂರು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

