ಮಾನ್ವಿ -: ಮಾನ್ವಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ (ಜಮೇದಾ‌ರ್) ಇಸ್ಮಯಿಲ್ (43) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದು, ಸಂಜೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೆಲವು ದಿನಗಳ ಹಿಂದೆ ಮಾನ್ವಿ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ನಂತರ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಮುಂದುವರಿಸಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಮಾನ್ವಿಗೆ ಮರಳಿದ್ದರೂ, ಭಾನುವಾರ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಮಾನ್ವಿಯ ಹುದಾ ಮಸೀದಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಲು ಗಿರಿ ಅವರು ಪೊಲೀಸ್‌ ಇಲಾಖೆಯ ಪರವಾಗಿ ಸರ್ಕಾರಿ ಗೌರವ ಸಲ್ಲಿಸಿದರು. ಶಾಸಕ ಹಂಪಯ್ಯ ನಾಯಕ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು.

ಸಿಂಧನೂರು ಗ್ರಾಮೀಣ ಡಿ.ವೈ.ಎಸ್.ಪಿ. ಚಂದ್ರಶೇಖ‌ರ್, ಮಾನ್ವಿ ಪಿ.ಐ. ಸೋಮಶೇಖರ್ ಎಸ್.ಕೆಂಚ ರೆಡ್ಡಿ, ಮೃತರ ಸಹೋದರ ಹಾಗೂ ಪುರಸಭೆಯ ಮಾಜಿ ಸದಸ್ಯರಾದ ಮೌಲಾನ ಫರೀದ್ ಉಮ್ಮಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ರಾಜ ಸುಭಾಶ್ಚಂದ್ರ ನಾಯಕ್, ಹೆಚ್.ಬಿ.ಎಂ ಬಾಷಾ, ಮಮ್ಮದ್ ಜಾವೀದ್, ಸತ್ತಾ‌ರ್ ಬಂಗ್ಲೆವಾಲೆ, ಮಾನ್ವಿ ಪೊಲೀಸ್‌ ಠಾಣೆಯ ಸಿಬ್ಬಂದಿ ವರ್ಗದವರು ಇದ್ದರು.

Leave a Reply

Your email address will not be published. Required fields are marked *