ಮಾನ್ವಿ,: ನೀರಮಾನ್ವಿ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಾಲಾ ಮಕ್ಕಳೊಂದಿಗೆ ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ಮಾತನಾಡುತ್ತಾ “ವಿದ್ಯಾರ್ಥಿಗಳು ಗುಟ್ಕಾ, ಮದ್ಯಪಾನ, ಧೂಮಪಾನ, ಮೊಬೈಲ್ ಗೇಮಿಂಗ್, ಬೆಟ್ಟಿಂಗ್ ಹಾಗೂ ತಂಬಾಕಿನ ವಿವಿಧ ದುಶ್ಚಟಗಳಿಂದ ದೂರವಿದ್ದು ಸಾಧನೆ ಕಡೆ ಗಮನ ಹರಿಸಬೇಕು. ತಂಬಾಕು ಸೇವನೆಯಿಂದ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳು ಉಂಟಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ” ಎಂದು ಹೇಳಿದರು. “ಉತ್ತಮ ಸ್ನೇಹಿತರ ಸಹವಾಸ, ಪುಸ್ತಕ ಓದು, ಕ್ರೀಡೆ ಹಾಗೂ ಸಂಗೀತದಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ಆರೋಗ್ಯ ಹಾನಿ, ಆರ್ಥಿಕ ಸಮಸ್ಯೆ ಹಾಗೂ ಸಾಮಾಜಿಕ ಅಗೌರವ ಎದುರಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಲಯ ಮೇಲ್ವಿಚಾರಕ ಗುರುರಾಜ್ ಮಾತನಾಡಿ ಸಂಸ್ಥೆ ವತಿಯಿಂದ ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ಜಾಗೃತಿ, ಪರಿಸರ ಹಾಗೂ ಆರೋಗ್ಯ ಸಂಬಂಧಿತ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಮಕ್ಬೂಲ್ ಅಹ್ಮದ್, ಶಿಕ್ಷಕರಾದ ಜಯಣ್ಣ, ಲಕ್ಷ್ಮೀದೇವಿ ಹಾಗೂ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

