ಬಳ್ಳಾರಿ / ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ನಿಮಿತ್ತ ಒಕ್ಕೂಟ ಸಭೆಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ,ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ ಕಾರ್ಯಕ್ರಮದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಯೋಜನೆಯಿಂದ ನಡೆಸುತ್ತಿರುವ ಕಾರ್ಯಕ್ರಮ ಇದಾಗಿದ್ದು ತಂಬಾಕು ವಿರೋಧ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಧ್ಯವರ್ಜನ ಶಿಬಿರ, ಈ ರೀತಿಯ ಹಲವು ಮಾಹಿತಿ ಶಿಬಿರಗಳ ಮೂಲಕ ಸಾರ್ವಜನಿಕರಿಗೆ, ಶಾಲಾ ಕಾಲೇಜುಗಳಲ್ಲಿ, ಪ್ರತಿ ವರ್ಷ ಯೋಜನೆಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಬಿ. ಎಸ್. ಶಿವಮೂರ್ತಿ, ಮತ್ತು ಮುದ್ದಾಪುರ ಗ್ರಾಮದ ವಿಜಯ ಕರನಾಡು ಕರ್ನಾಟಕ ರಕ್ಷಣಾ ವೇದಿಕೆ ಕಂಪ್ಲಿ ತಾಲೂಕಿನ ಗೌರವಾಧ್ಯಕ್ಷ ಬಿ. ಗೋಪಾಲ ಯಾದವ್ ಭಾಗವಹಿಸಿ ಯೋಜನೆಯಿಂದ ರಾಜ್ಯಾದ್ಯಂತ ಪರಮ ಪೂಜ್ಯರು ಉತ್ತಮ ಸಮಾಜ ನಿರ್ಮಾಣಕ್ಕೆ ಹಾಗೂ ಸಮಾಜಮುಖಿ, ಸೇವಾ ಕಾರ್ಯಕ್ರಮಗಳನ್ನು ಅತ್ಯಂತ ಉತ್ತಮವಾಗಿ ನಡೆಸುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿ ಯೋಜನೆಯ ಎಲ್ಲಾ ಸೇವಾಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ನಮ್ಮ ಸಹಕಾರ ಸಂಪೂರ್ಣವಾಗಿ ನೀಡುವುದಾಗಿ ಹೇಳಿದರು. ಸಂಪನ್ಮೂಲ ವ್ಯಕ್ತಿ ಜಿಲಾನ್ ಸಾಬ್ ಬಡಿಗೇರ್ ಮಾತನಾಡಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕುರಿತು ಸದಸ್ಯರಿಗೆ ತಂಬಾಕು ಸೇವನೆಯಿಂದಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಇಂತಹ ಹವ್ಯಾಸಗಳಿಂದ ಸಮಾಜ ಹಾಳಾಗುತ್ತಿರುವ ಬಗ್ಗೆ ಪ್ರತಿ ದಿನ ಸಮಾಜದಲ್ಲಿ ನಡೆವುತ್ತಿರುವ ದುರ್ಘಟನೆಗಳ ಬಗ್ಗೆ ಸಣ್ಣ ಸಣ್ಣ ಉದಾರಣೆ ನೀಡುವ ಮೂಲಕ ಉತ್ತಮ ಮಾಹಿತಿ ನೀಡಿದರು. ಒಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಸಂದರ್ಭದಲ್ಲಿ ಮುದ್ದಾಪುರ ಗ್ರಾಮದಲ್ಲಿ ಕಳೆದ ಮೂರುವರೆ ವರ್ಷಗಳ ಕಾಲ ಸೇವಾ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ ಸೇವಾಪ್ರತಿನಿಧಿ ಚೈತ್ರಾ ಅವರಿಗೆ ಒಕ್ಕೂಟದವರಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆ ತಾಲೂಕಿನ ಕೃಷಿ ಅಧಿಕಾರಿಗಳಾದ ಸಂಜುಕುಮಾರ್, ಒಕ್ಕೂಟದ ಅಧ್ಯಕ್ಷರಾದ ಸಾವಿತ್ರಮ್ಮ, ಉಪಾಧ್ಯಕ್ಷರಾದ ಲಕ್ಷ್ಮಿ, ಹಾಗೂ ಪದಾಧಿಕಾರಿಗಳು, ಮೇಲ್ವಿಚಾರಕರಾದ ಸೋಮಶೇಖರ್, ಸೇವಾಪ್ರತಿನಿಧಿ ಗಂಗಮ್ಮ, ಹಾಗೂ ಕುಮಾರಿ ಕವಿತಾ ಸೇರಿದಂತೆ ಸ್ವ ಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್

