ನಗರದ ತೋಟಗಾರಿಕೆ ಇಲಾಖೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಕೆಲವು ಶ್ರೀಮಂತರು ಅತಿಕ್ರಮಣ ಮಾಡಿಕೊಂಡಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಅತಿಕ್ರಮಣ ಮಾಡಿಕೊಂಡವರನ್ನು ಹದ್ದುಬಸ್ತಿನಲ್ಲಿ ಹಾಕಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹೋರಾಟ ಮುಖ್ಯಸ್ಥ ಡಿ.ಎಚ್.ಪೂಜಾರ ಜಿಲ್ಲೆಯ ಅಧಿಕಾರಿಗಳಿಗೆ ಸಮಿತಿ ವತಿಯಿಂದ ಗಡುವು ನೀಡಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರವಾಸಿ ಮಂದಿರದ ಎದುರುಗಡೆಯಿರುವ ತೋಟಗಾರಿಕೆ ಇಲಾಖೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಉಳ್ಳ ಹಣವಂತರು ಅತಿಕ್ರಮಿಸಿದ್ದು, ಅದನ್ನು ತೆರವುಗೊಳಿಸಿ ಹಾಗೂ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು.15 ದಿನಕ್ಕೆ ಧರಣಿ ಮುಂದುವರಿದಿದ್ದು, ಪ್ರತಿಭಟನೆ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹಮ್ಮದ್ ಅಲಿಯವರು ಭೇಟಿ ನೀಡಿದ್ದರು. ಆದರೆ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ ಹೋಗಿದ್ದಾರೆ.
ಈ ಕುರಿತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ 10/10 ಜಾಗ ಬಾಡಿಗೆ ಪಡೆದು ಕೊಡುವಂತೆ ಕೇಳಿದ್ದಾರೆ. ಇದು ಸ್ವಲ್ಪ ಆಶಾದಾಯಕವಾದ ಬೆಳವಣಿಗೆಯಾಗಿದೆ ಎಂದರು.
ಹೈಕೋರ್ಟ್ ಮತ್ತು ಭೂ ಕಬಳಿಕೆ ನಿಷೇಧ ನ್ಯಾಯಾಲಯ ಒತ್ತುವರಿ ತೆರವು ಗೊಳಿಸುವಂತೆ ಆದೇಶಮಾಡಿದೆ. ಅದನ್ನು ಪಾಲಿಸಬೇಕಾದ ಅಧಿಕಾರಿಗಳು ನಗರದಲ್ಲಿ ಅನೇಕ ಕಡೆಗೆ ಒತ್ತುವರಿಯಾಗಿದೆ ಅದನ್ನು ಬಿಡಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಎಸ್. ದೇವೇಂದ್ರಗೌಡ, ಖಾದಿಂಸಾಬ್, ಬಿ.ಎನ್.ಯರದಿಹಾಳ, ರಸೂಲ್ ಸಾಬ್, ಹುಸೇನ್ ಸಾಬ್, ಸೇರಿದಂತೆ ಅನೇಕರಿದ್ದರು.

