ಸಿಂಧನೂರು: ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಶಾಸಕರ ಮೂಲಮಂತ್ರವಾಗಿದ್ದು, ಅದರಂತೆ ನಿನ್ನೆ ದಿನ ಕ್ಷೇತ್ರದ ನಾಲ್ಕು ಪ್ರಮುಖ ಭಾಗಗಳಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಕ್ರಾಂತಿಗೆ ನಾಂದಿ ಹಾಡಲಾಯಿತು. ಮಾನ್ಯ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರ ಮಾರ್ಗದರ್ಶನದಲ್ಲಿ, ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾದ ಶ್ರೀ ಬಾಬುಗೌಡ ಬಾದರ್ಲಿ ಅವರು ಸುಮಾರು 7.50 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ಅನುದಾನದಡಿ ಅರಗಿನಮರ ಕ್ಯಾಂಪಿನಿಂದ ಆರ್.ಎಚ್. ನಂ–1 ರವರೆಗೆ (₹3.80 ಕೋಟಿ) ಹಾಗೂ ಅಲ್ಲಿಂದ ಈರಣ್ಣ ಕ್ಯಾಂಪಿನವರೆಗೆ (₹2.40 ಕೋಟಿ) ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಇದು ಈ ಭಾಗದ ಕೃಷಿಕರ ಹಾಗೂ ವ್ಯಾಪಾರಸ್ಥರ ದಶಕಗಳ ಕನಸನ್ನು ನನಸು ಮಾಡಲಿದೆ.
ಬಾಲಯ್ಯ ಕ್ಯಾಂಪ್‌ನಲ್ಲಿ ₹60 ಲಕ್ಷ ಹಾಗೂ ಹಾರಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ₹25 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಸುಸಜ್ಜಿತ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ಹಳ್ಳಿಗಳ ಮುಖಪುಟ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ.
ಕಲ್ಲೂರು ಗ್ರಾಮದಲ್ಲಿ ₹45 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, “ಗ್ರಾಮೀಣ ಭಾಗದ ರಸ್ತೆಗಳು ಕೇವಲ ದಾರಿಗಳಲ್ಲ, ಅವು ಜನರ ಆರ್ಥಿಕ ಶಕ್ತಿಯ ಮೂಲಗಳು. ಶಾಸಕರ ಅನುಪಸ್ಥಿತಿಯಲ್ಲೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗದಂತೆ ನಾವು ಜನಸೇವೆಯಲ್ಲಿ ತೊಡಗಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುವುದು,” ಎಂದು ಭರವಸೆ ನೀಡಿದರು.
ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶ್ರೀ ಬಾಬುಗೌಡ ಬಾದರ್ಲಿ ಅವರು, “ಕೇವಲ ರಸ್ತೆ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಲ್ಲ, ಬದಲಾಗಿ ಅವು ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಸಹ ನಿಗಾ ವಹಿಸಬೇಕು,” ಎಂದು ಕರೆ ನೀಡಿದರು.
“ಅರಗಿನಮರ ಕ್ಯಾಂಪ್ ಮತ್ತು ಈರಣ್ಣ ಕ್ಯಾಂಪ್ ಭಾಗದ ರಸ್ತೆಗಳು ಹದಗೆಟ್ಟಿದ್ದರಿಂದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದರು. ಈಗ ರೂ. 6.20 ಕೋಟಿ ವೆಚ್ಚದ ಡಾಂಬರೀಕರಣದಿಂದ ಈ ಭಾಗದ ಕೃಷಿ ಆರ್ಥಿಕತೆಗೆ ದೊಡ್ಡ ಮಟ್ಟದ ಬಲ ಸಿಗಲಿದೆ. ಹೊಲಗದ್ದೆಗಳಿಗೆ ಹೋಗುವ ರೈತರಿಗೆ ಮತ್ತು ಶಾಲಾ ಮಕ್ಕಳಿಗೆ ಇದು ವರದಾನವಾಗಲಿದೆ,” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಬಾಲಯ್ಯ ಕ್ಯಾಂಪ್ ಮತ್ತು ಹಾರಾಪುರ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇಂದು ಕಾಮಗಾರಿ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಶಾಸಕ ಹಂಪನಗೌಡ ಬಾದರ್ಲಿ ಅವರ ಅಭಿವೃದ್ಧಿ ಪರ ಕಾಳಜಿಗೆ ಜನರು ಕೃತಜ್ಞತೆ ಸಲ್ಲಿಸಿದರು.
ಕ್ಷೇತ್ರದ ಪ್ರತಿಯೊಂದು ಕ್ಯಾಂಪ್‌ಗಳನ್ನು ಮುಖ್ಯ ರಸ್ತೆಗೆ ಸಂಪರ್ಕಿಸುವ ಬೃಹತ್ ಯೋಜನೆಯನ್ನು ಶಾಸಕರು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಉಳಿದ ಗ್ರಾಮಗಳಿಗೂ ಅನುದಾನ ಬಿಡುಗಡೆ ಮಾಡಿಸಿ, ಸಿಂಧನೂರನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಮುಖಂಡರಾದ ಶಿವನಗೌಡ ಎಲೆಕುಡ್ಲುಗಿ ಮತ್ತು ಆನಂದ್ ಪಾಟೀಲ್ ಬೊಮ್ಮನಾಳ್ , ಶರಣೇಗೌಡ ತುಗ್ಗಲದಿನ್ನಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವನಗೌಡ ಎಲೆಕುಡ್ಲುಗಿ, ಪ್ರಮುಖ ಮುಖಂಡರಾದ ಆನಂದ್ ಪಾಟೀಲ್ ಬೊಮ್ಮನಾಳ್, ಶರಣೇಗೌಡ ತುಗ್ಗಲದಿನ್ನಿ ಸೇರಿದಂತೆ ಕ್ಷೇತ್ರದ ಹಿರಿಯ ಮುಖಂಡರು, ಇಲಾಖೆಯ ಅಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾದರು.
ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳು ಈಡೇರುತ್ತಿರುವುದಕ್ಕೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.

Leave a Reply

Your email address will not be published. Required fields are marked *