ರಾಯಚೂರು,ಏ:01, ಜೀವನದ ಕೆಲವು ಘಟನೆಗಳಿಂದ ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದೆಯೇ ಹೆಚ್ಐವಿ ಸೋಂಕಿನ ಸಾಧ್ಯತೆಗಳನ್ನು ಆರಂಭದಲ್ಲಿಯೇ ಗುರ್ತಿಸಲು ಹಾಗೂ ಅಪಾಯಕಾರಿ ಯಾಗಬಹುದಾದ ಸನ್ನಿವೇಶಗಳಿಂದ ದೂರವಾಗಲು ಯಾವ ಸಂಕೋಚವಿಲ್ಲದೆ ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸ್ಥಿತಿ ತಿಳಿಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ರಾಯಚೂರು ರವರ ಆಶ್ರಯದಲ್ಲಿ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಏರ್ಪಡಿಸಿದ್ದ, ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ-2026 ರ ಮೂಲಕ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ,
ಅಸುರಕ್ಷಿತ ಲೈಂಗಿಕ ಸಂಪರ್ಕ, ಅಸುರಕ್ಷಿತ ಸೂಜಿ ಸಿರೇಂಜ್ ಬಳಕೆ, ಪರೀಕ್ಷಿಸದ ಅಸುರಕ್ಷಿತವಾದ ರಕ್ತ ಪಡೆಯುವುದು, ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಬರುವ ಸಾಧ್ಯತೆಗಳನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಿದೆ. ಇದಕ್ಕಾಗಿ ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಗಳ ಐಸಿಟಿಸಿ ಕೇಂದ್ರಗಳಲ್ಲಿ ಸೂಕ್ತ ಸಮಾಲೋಚನೆ, ಉಚಿತ ಪರೀಕ್ಷೆ, ಹಾಗೂ ಸೋಂಕು ಕಂಡುಬಂದಲ್ಲಿ ಗೌಪ್ಯತೆ ಕಾಪಾಡುವ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ ಮಹಮ್ಮದ್ ಶಾಕೀರ್ ಮೊಹಿಯುದ್ದೀನ್, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಪ್ರಶ್ನೋತ್ತರದ ಮೂಲಕ, ಅಥವಾ ಅವರಲ್ಲಿ ಸೊಂಕು ಹರಡಬಹುದಾದ ಸಾಧ್ಯತೆಗಳಿದ್ದಲ್ಲಿ ಕನಿಷ್ಟ ಶೇಖಡಾ 95 ರಷ್ಟು ಜನ ತಪಾಸಣೆ ಮಾಡಿಸಿಕೊಳ್ಳುವುದು, ಖಚಿತಪಟ್ಟ ಸೋಂಕಿತರಲ್ಲಿ ಶೇಕಡಾ 95 ರಷ್ಟು ಜನರನ್ನು ಎಆರ್ಟಿ ಕೇಂದ್ರಗಳಿಗೆ ಚಿಕಿತ್ಸೆಗೆ ಬರುವಂತೆ ಮಾಡುವುದು ಹಾಗೂ ಸೋಂಕಿತರಾಗಿ ಎಆರ್ಟಿ ಚಿಕಿತ್ಸೆ ಪಡೆಯುವರಲ್ಲಿ ಶೇಖಡಾ 99 ರಷ್ಟು ಜನರನ್ನು ಸದಾ ನಿಗಾವಣೆ, ಆಪ್ತಸಮಾಲೋಚನೆಯಿಂದ ಚಿಕಿತ್ಸೆ ಬಿಡದಂತೆ ಆರೋಗ್ಯ ಶಿಕ್ಷಣ ನೀಡುವ ಮೂಲಕ ವೈರಲ್ ಲೋಡ್ ಹೆಚ್ಚಾಗದಂತೆ ಕ್ರಮ ವಹಿಸಲಾಗುವ ಅಭಿಯಾನವಾಗಿದ್ದು ಜಿಲ್ಲೆಯಲ್ಲಿ ಜನತೆಯಿಂದ ಉತ್ತಮ ಸ್ಪಂದನೆ ದೊರಕಿರುವುದು ಆಶಾದಾಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ ಕೆ, ಡಿಪಿಡಿಓ ಡಾ ಚಂದ್ರಶೇಖರಯ್ಯ ಸ್ವಾಮಿ, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಪಿಎಸ್ಎಮ್ ವಿಭಾಗದ, ಡಾ ರೂಪಕಲಾ, ಡಾ ಪ್ರತಿಭಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ಜಿಲ್ಲಾ ಕ್ಷಯರೋಗ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ, ಡಿಪಿಪಿಎಮ್ಸಿ ಮೊಹೀನ್ ಪಾಶಾ, ಸಿಪಿಓ ಬಸವರಾಜಗೌಡ ಸೇರಿದಂತೆ ವೈದ್ಯರು, ವಿವಿಧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಏಡ್ಸ್ ವಿಭಾಗದ ಸಿಬ್ಬಂದಿಯರು, ಎಸ್ಟಿಎಸ್, ಎಸ್ಟಿಎಲ್ಎಸ್ ಟಿಬಿ ವಿಭಾಗ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.


