ಕವಿತಾಳ ಮಾರ್ಚ್ 28 :
ಪಟ್ಟಣ ಸಮೀಪದ ಅಮೀನಗಡ ಗ್ರಾಮದಲ್ಲಿ ಇಂದು ಖಾಸಗಿ ವೈದ್ಯನ ಚಿಕಿತ್ಸೆ ಅಡ್ಡ ಪರಿಣಾಮ ಬೀರಿ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದ್ದು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕಿಯನ್ನು ಸಿಂಧೂ ತಂದೆ ಹುಲಿಗೆಪ್ಪ(15)ಎಂದು ಗುರುತಿಸಲಾಗಿದ್ದು, ಈಕೆಗೆ ಅರಾಮಿಲ್ಲದ್ದರಿಂದ ಅವಳ ಅಜ್ಜಿಯು ಅಮೀನಗಡದ ಖಾಸಗಿ ವೈದ್ಯ ಉತ್ತಮಕುಮಾರ್ ಎನ್ನುವವರ ಹತ್ತಿರ ದಿನಾಂಕ 27.೦3.2026 ರಂದು ತಡರಾತ್ರಿ 01.30 ಗಂಟೆಗೆ ಸುಮಾರಿಗೆ ಕರೆದುಕೊಂಡು ಹೋಗಿದ್ದಾಗ ಸದರಿ ಖಾಸಗಿ ವೈದ್ಯರು ಬಾಲಕಿಯ ಆರೋಗ್ಯದಲ್ಲಿ ಯಾವ ತೊಂದರೆ ಇದೆ ಎಂದು ತಿಳಿದುಕೊಳ್ಳದೆ ತನಗೆ ತಿಳಿದಂತೆ ಯಾವುದೋ ಇಂಜೆಕ್ಷನ್ ಮಾಡಿದ್ದರಿಂದ ಸದರಿ ಇಂಜೆಕ್ಷನ್ ಅಡ್ಡ ಪರಿಣಾಮವಾಗಿ ಬಾಲಕಿಯ ದೇಹದಲ್ಲಿ ಏರುಪೇರು ಉಂಟಾಗಿ ಮಾನವಿ ಸರ್ಕಾರಿ ಆಸ್ಪತ್ರೆಗೆ ಇಲಾಜು ಮಾಡಿಸಲು ನಿನ್ನೆ ಕರೆದುಕೊಂಡು ಹೋಗಿದ್ದಾಗ ಸರ್ಕಾರಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಕಾರಣ ಮೃತ ಬಾಲಕಿಗೆ ಇರುವ ಆರೋಗ್ಯ ತೊಂದರೆಯನ್ನು ಸರಿಯಾಗಿ ತಿಳಿದುಕೊಳ್ಳದೆ ನಿಷ್ಕಾಳಜಿಯಿಂದ ಮತ್ತು ಆಲಕ್ಷತನದಿಂದ ಯಾವುದೋ ಔಷಧಿಯ ಇಂಜೆಕ್ಷನ್ ಮಾಡಿದ್ದರಿಂದ ನನ್ನ ಮಗಳು ಮೃತಪಟ್ಟಿರುತ್ತಾಳೆ ಅವಳ ಸಾವಿಗೆ ಕಾರಣನಾದ ಖಾಸಗಿ ವೈದ್ಯ ಉತ್ತಮಕುಮಾರ್ ಆರ್. ಹೆಚ್.ಕ್ಯಾಂಪ್ 02 ಸಿಂಧನೂರು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ತಂದೆ ಹುಲಿಗೆಪ್ಪ ನೀಡಿದ ದೂರಿನ ಮೇರಗೆ ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ ಗುರುಚಂದ್ರ ಯಾದವ್ ಮುಂದಿನ ತನಿಖೆ ಕೈಗೊಂಡಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯ ನಾಪತ್ತೆಯಾಗಿದ್ದು ವೈದ್ಯನ ಶೋಧ ಕಾರ್ಯ ಮುಂದುವರೆದಿದೆ.

