ಮಾನ್ವಿ- ಸರ್ವ ಜನಾಂಗದ ಆಶಯ ಹೊತ್ತ, ಸಮ ಸಮಾಜದ ನಿರ್ಮಾಣದ ಉದ್ದೇಶದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಈ ದೇಶದ ಪ್ರತಿಯೊಬ್ಬ ನಾಗರಿಕರ ಎದೆಯ ದನಿಯಾಗಿದೆ ಎಂದು ಉಪನ್ಯಾಸಕ ದುರಗಪ್ಪ ಅಮರಾವತಿ ಹೇಳಿದರು
ಅವರು ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನದ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಂವಿಧಾನದ ಆಶೋತ್ತರಗಳನ್ನು ಜನಮಾನಸಕ್ಕೆ ಮುಟ್ಟಿಸಲು,ಉತ್ತಮ ಪ್ರಜೆಗಳಾಗಿ ಬದುಕಲು, ವಿವಿಧತೆಯಲ್ಲಿ ಏಕತೆ ಕಾಣಲು,ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಲು ನಮಗೆ ಸಂವಿಧಾನದ ಅರಿವು ಅಗತ್ಯವಿದೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್. ಎಸ್. ಪಾಟೀಲ ಅವರು ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಅದರ ಮಹತ್ವವನ್ನು ವಿವರಿಸಿದರು.
ಕಲಾವಿಭಾಗದ ಮುಖ್ಯಸ್ಥ ರಮೇಶಬಾಬು ಯಾಳಗಿ, ವಿಜ್ಞಾನ ವಿಭಾಗದ ಮುಖ್ಯಸ್ಥ ಅಬ್ದುಲ್ ಬೇಗ್
ಎನ್. ಸಿ. ಸಿ ಅಧಿಕಾರಿ ವಿರುಪಣ್ಣ ಪಾಟೀಲ, ಎನ್.ಎಸ್. ಎಸ್ ಕಾರ್ಯಕ್ರಮಾಧಿಕಾರಿ ನರಸಣ್ಣ ಸುಂಕೇಶ್ವರ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಮಹೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು, ಉಪನ್ಯಾಸಕಿ ಪ್ರಿಯಾಂಕ ನಾಯಕ ಸ್ವಾಗತಿಸಿದರು, ಉಪನ್ಯಾಸಕ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕ ಸಿದ್ದಪ್ಪ ಅಮರಾವತಿ ವಂದಿಸಿದರು

